
ಹುಕ್ಕೇರಿ: ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ ನಿರ್ದೆಶಕರ ಸ್ಥಾನಕ್ಕೆ ಹುಕ್ಕೇರಿ ಕ್ಷೇತ್ರದ ಚುನಾವಣೆಗೆ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡ ಹಿನ್ನಲೆಯಲ್ಲಿ ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ ನೇತೃತ್ವದಲ್ಲಿ ಸಂಭ್ರಮಾಚರಣೆ ಶನಿವಾರ ನಡೆಯಿತು.
‘ಅ.19 ರಂದು (ಭಾನುವಾರ) ಹುಕ್ಕೇರಿ ಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಜರುಗಲಿದ್ದು, ಬೆಳಿಗ್ಗೆ 9 ರಿಂದ ಮಧ್ಯಾಹ್ನ 4 ರವರೆಗೆ ಮತದಾನ ಜರುಗಲಿದೆ’ ಎಂದು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ರಮೇಶ್ ಕತ್ತಿ ತಿಳಿಸಿದರು.
ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, ‘ಅಧರ್ಮಿಯರ ವಿರುದ್ಧ ಧರ್ಮ ಗೆದ್ದಿದೆ. ನಮ್ಮ ನ್ಯಾಯಕ್ಕೆ ಜಯ ಸಿಕ್ಕಿದಂತಾಗಿದೆ. ಹಿರಿಯರ ಮತ್ತು ಕಾನೂನು ತಜ್ಞರ ಸಲಹೆಯಂತೆ ಕಾನೂನು ಹೋರಾಟ ಮಾಡಿದ್ದೇವೆ’ ಎಂದರು.
ವಿನಂತಿ: ಕ್ಷೇತ್ರದ 92 ಡೆಲಿಗೇಟ್ಸ್ ( ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಗೆ ಮತ ಚಲಾಯಿಸುವವರು) ಭಾನುವಾರ ಬೆಳಗಾವಿಯ ಕ್ಯಾಂಪ್ ಪ್ರದೇಶದ ಬಿ.ಕೆ.ಮಾಡಲ್ ಹೈಸ್ಕೂಲಿನಲ್ಲಿ ಮತದಾನ ಮಾಡುವಂತೆ ವಿನಂತಿಸಿದರು.
ಗೆಲುವು ನಮ್ಮದೆ: ‘ಭಾನುವಾರ ಜರುಗುವ 7 ಕ್ಷೇತ್ರದ ಚುನಾವಣೆಯಲ್ಲಿ ಎಲ್ಲ ಏಳು ಅಭ್ಯರ್ಥಿಗಳು (ಜಾರಕಿಹೊಳಿ ವಿರೋಧ ಬಣದ) ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕ ಸತ್ಯಪ್ಪ ನಾಯಿಕ, ಮುಖಂಡರಾದ ಸಂಜಯ ನಿಲಜಗಿ, ಪ್ರಜ್ವಲ್ ನಿಲಜಗಿ, ಗುರುರಾಜ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.