ADVERTISEMENT

ಬೆಳಗಾವಿ | ಮೇಯರ್‌ಗೆ ಅಗೌರವ ತೋರಿ ಶಿಷ್ಟಾಚಾರ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 13:49 IST
Last Updated 27 ನವೆಂಬರ್ 2023, 13:49 IST
ಬೆಳಗಾವಿಯ ನಗರ ಪೊಲೀಸ್‌ ಆಯುಕ್ತರ ಕಚೇರಿ ಮುಂದೆ ಮೇಯರ್‌ ಶೋಭಾ ಸೋಮನಾಚೆ ಮತ್ತು ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ನಗರ ಪೊಲೀಸ್‌ ಆಯುಕ್ತರ ಕಚೇರಿ ಮುಂದೆ ಮೇಯರ್‌ ಶೋಭಾ ಸೋಮನಾಚೆ ಮತ್ತು ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ‘ಪಾಲಿಕೆ ಸದಸ್ಯ ಅಭಿಜಿತ ಜವಳಕರ್‌ ಬಂಧನ ಪ್ರಕರಣದ ಕುರಿತು ಚರ್ಚಿಸಲು ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಬಂದಿದ್ದ ಮೇಯರ್‌ ಶೋಭಾ ಸೋಮನಾಚೆ ಅವರಿಗೆ ಪೊಲೀಸರು ಅಗೌರವ ತೋರಿ, ಶಿಷ್ಟಾಚಾರ ಉಲ್ಲಂಘಿಸಿದ್ದಾರೆ’ ಎಂದು ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಆರೋಪಿಸಿದರು.

ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ರಾಮಪ್ಪ ಅವರನ್ನು ಭೇಟಿಯಾಗಲು ಅನುಮತಿ ಪಡೆದಿದ್ದ ಬಿಜೆಪಿ ನಾಯಕರು, ಕಚೇರಿಯೊಳಗೆ ತೆರಳಲು ಮುಂದಾದರು. ಆದರೆ, ಕ್ಯಾಂಪ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಲ್ತಾಫ್‌ ಮತ್ತು ಇತರೆ ಪೊಲೀಸರು ಕಚೇರಿಯೊಳಗೆ ಹೋಗಲು ಅವಕಾಶ ನೀಡಲಿಲ್ಲ. ಹಾಗಾಗಿ ಕಚೇರಿ ಮುಂದೆಯೇ ಪ್ರತಿಭಟನೆಗೆ ಕುಳಿತರು.

‘ಮುಂಚಿತವಾಗಿ ಅನುಮತಿ ಪಡೆದರೂ, ಕಚೇರಿಯೊಳಗೆ ತೆರಳಲು ಅವಕಾಶ ನೀಡದೆ ನೀವು ಮೇಯರ್‌ಗೆ ಅಪಮಾನ ಮಾಡಿದ್ದೀರಿ’ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಆಗ ಪ್ರತಿಭಟನಾ ಸ್ಥಳಕ್ಕೆ ಬಂದ ಮಾರ್ಕೆಟ್‌ ಉಪವಿಭಾಗದ ಎಸಿಪಿ ನಾರಾಯಣ ಭರಮನಿ ಅವರು, ಮೇಯರ್ ಮತ್ತು ಇತರೆ ಬಿಜೆಪಿ ಮುಖಂಡರನ್ನು ಕಚೇರಿಯೊಳಗೆ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದರು.

ನಂತರ ಎಸ್‌.ಎನ್‌.ಸಿದ್ರಾಮಪ್ಪ ಮಾತನಾಡಿ, ‘ನನ್ನ ಭೇಟಿಗೆ ಮೇಯರ್‌ ಬಂದಿರುವುದು ಗಮನಕ್ಕೆ ಬಂದಿರಲಿಲ್ಲ. ಅವರಿಗೆ ಅಗೌರವ ತೋರುವ ಉದ್ದೇಶವೂ ಇಲ್ಲ. ಭರಮನಿ ಈ ವಿಷಯ ತಿಳಿಸುತ್ತಿದ್ದಂತೆ, ನಾನೇ ಅವರನ್ನು ಭೇಟಿಯಾಗಲು ಬಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.