ADVERTISEMENT

ಬಡವರ ಜೊತೆಗಿರುವ ಬಿಜೆಪಿ ಸರ್ಕಾರ: ಆನಂದ ಮಾಮನಿ

ಅರ್ಚಕರಿಗೆ ದಿನಸಿ ಕಿಟ್, ಆಂಬುಲೆನ್ಸ್‌ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 12:19 IST
Last Updated 8 ಜೂನ್ 2021, 12:19 IST
ಯಲ್ಲಮ್ಮನಗುಡ್ಡದಲ್ಲಿ ಯರಗಟ್ಟಿ, ಮುನವಳ್ಳಿ, ಸವದತ್ತಿ ಸರ್ಕಾರಿ ಆಸ್ಪತ್ರೆಗಳಿಗೆ ತಮ್ಮ ನಿಧಿಯಲ್ಲಿ ನೀಡಿದ ಆಂಬುಲೆನ್ಸ್‌ಗಳನ್ನು ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಮಂಗಳವಾರ ಸೇವೆಗೆ ಸಮರ್ಪಿಸಿದರು
ಯಲ್ಲಮ್ಮನಗುಡ್ಡದಲ್ಲಿ ಯರಗಟ್ಟಿ, ಮುನವಳ್ಳಿ, ಸವದತ್ತಿ ಸರ್ಕಾರಿ ಆಸ್ಪತ್ರೆಗಳಿಗೆ ತಮ್ಮ ನಿಧಿಯಲ್ಲಿ ನೀಡಿದ ಆಂಬುಲೆನ್ಸ್‌ಗಳನ್ನು ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಮಂಗಳವಾರ ಸೇವೆಗೆ ಸಮರ್ಪಿಸಿದರು   

ಉಗರಗೋಳ (ಸವದತ್ತಿ ತಾ.): ‘‌ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡವರ ಜೊತೆಗಿವೆ. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಯಾವುದೇ ಕುಟುಂಬದವರೂ ಹಸಿವಿನಿಂದ ಮಲಗಬಾರದು ಎಂದು ಪ್ರತಿ ತಿಂಗಳು ಉಚಿತ ಪಡಿತರವನ್ನು ದೀಪಾವಳಿವರೆಗೂ ಕೊಡಲಾಗುತ್ತಿದೆ’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಸವದತ್ತಿ ತಾಲ್ಲೂಕಿನ ದೇವಸ್ಥಾನಗಳ ಅರ್ಚಕರಿಗೆ ದಿನಸಿ ಕಿಟ್ ವಿತರಿಸಿ, ತಮ್ಮ (ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ) ಅನುದಾನದಲ್ಲಿ ₹ 44 ಲಕ್ಷ ವೆಚ್ಚದಲ್ಲಿ ಯರಗಟ್ಟಿ, ಮುನವಳ್ಳಿ, ಸವದತ್ತಿ ಸರ್ಕಾರಿ ಆಸ್ಪತ್ರೆಗಳಿಗೆ ನೀಡಿರುವ ತಲಾ 1 ಅಂಬುಲೆನ್ಸ್‌ಗಳನ್ನು ಮಂಗಳವಾರ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.

‘ಜನರ ಸಹಾಯಕ್ಕೆ ಆಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಂಡು ಅಮೂಲ್ಯ ಜೀವ ಉಳಿಸಿಕೊಳ್ಳಬೇಕು’ ಎಂದರು.

ADVERTISEMENT

‘ದುಡಿಯುವ ಕೈಗಳಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಲಾಗುತ್ತಿದೆ. ಕೋವಿಡ್-19 ಮೂರನೇ ಅಲೆಯಲ್ಲಿ ಮಕ್ಕಳಿಗೆ ಹಾನಿ ಆಗದಂತೆ ನೋಡಿಕೊಳ್ಳಲು ಲಸಿಕೆ ನೀಡುವುದಕ್ಕಾಗಿ ಕ್ಲಿನಿಕಲ್‌ ಟ್ರಯಲ್‌ ನಡೆಯುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಅರ್ಹರೆಲ್ಲರೂ ಭಯ ಪಡದೆ ಲಸಿಕೆ ಹಾಕಿಸಿಕೊಳ್ಳಬೇಕು. 18 ವರ್ಷ ಮೇಲಿನವರಿಗೆ ಜೂನ್‌ 21ರಿಂದ ಉಚಿತವಾಗಿ ಲಸಿಕೆ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಅದರ ಲಾಭ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿದರು. ತಹಶೀಲ್ದಾರ್ ಪ್ರಶಾಂತ ಪಾಟೀಲ, ತಾ.ಪಂ. ಇಒ ಯಶವಂತಕುಮಾರ, ಸವದತ್ತಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಗ್ರೇಡ್‌–2 ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ, ಟಿಎಚ್‌ಒ ಮಹೇಶ ಚಿತ್ತರಗಿ, ಸಿ.ಎಸ್. ಪಟ್ಟಣಶೆಟ್ಟಿ, ದೇವಸ್ಥಾನದ ಎಂಜಿನಿಯರ್‌ ಎ.ವಿ. ಮುಳ್ಳೂರ, ಡಿ.ಆರ್. ಚವಾಣ, ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನಾ ಚೋಳಿನ ಮತ್ತು ಅರವಿಂದ್ರ ಮಾಳಗೆ, ಕೊಳ್ಳಪ್ಪಗೌಡ ಗಂದಿಗವಾಡ, ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐಗಳಾದ ಶಿವಾನಂದ ಗುಡಗನಟ್ಟಿ, ಯಲ್ಲಪ್ಪ ಕಾಳಪ್ಪನವರ, ಅರ್ಚಕ ಪಂಡಿತ ಯಡೂರಯ್ಯ, ಪರಸನಗೌಡ ಕಾಳಿಂಗೌಡ್ರ, ಬಸನಗೌಡ ಶೆಟ್ಟಿನಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.