ಬೆಳಗಾವಿ: ‘ಬಿಜೆಪಿಯಲ್ಲಿ ಭಿನ್ನಮತದ ಬೆಂಕಿ ಕಾಣಿಸಿಕೊಂಡಿದ್ದು, ಸರ್ಕಾರ ಶೀಘ್ರವೇ ಪತನಗೊಳ್ಳಲಿದೆ’ ಎಂದು ವಿಧಾನಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ ಹೇಳಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಚಿವ ಸಂಪುಟದಲ್ಲಿ ಅರ್ಧದಷ್ಟು ಮಂದಿ ನಮ್ಮ ಪಕ್ಷದಿಂದ ಹೋದವರೇ ಇದ್ದಾರೆ. ಅವರೆಲ್ಲರೂ ಅಸಮಾಧಾನಗೊಂಡಿದ್ದಾರೆ. ಒಬ್ಬರ ಮುಖದಲ್ಲೂ ಕಳೆ ಇಲ್ಲ. ಇದು, ಸರ್ಕಾರಕ್ಕೆ ಮುಳುವಾಗಲಿದೆ’ ಎಂದರು.
‘ಸರ್ಕಾರ ಬೀಳಲೆಂದು ನಾವು ಯಾವುದೇ ತಂತ್ರಗಳನ್ನು ಮಾಡಬೇಕಾದ ಅಗತ್ಯವೇ ಇಲ್ಲ. ತಾನಾಗಿಯೇ ಪತನಗೊಳ್ಳಲಿದೆ. ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಯಾರೂ ಸರ್ಕಾರ ಕೆಡವಲು ಕಾರ್ಯಾಚರಣೆ ನಡೆಸಬೇಕಾಗಿಲ್ಲ’ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಅವರಿಗೆ ಆದ ಆಘಾತ ನಮಗೂ ಆಗುತ್ತದೆ ಎಂಬ ಭ್ರಮೆಯಲ್ಲಿ ವಿರೋಧ ಪಕ್ಷದವರು ಇದ್ದಾರೆ. ನಮ್ಮ ಸರ್ಕಾರಅವಧಿಯನ್ನು ಪೂರ್ಣಗೊಳಿಸಲಿದೆ. ಸೂರ್ಯೋದಯ, ಚಂದ್ರೋದಯ ಎಷ್ಟು ಸತ್ಯವೋ, ನಮ್ಮ ಸರ್ಕಾರ ಮುಂದುವರಿಯುವುದೂ ಅಷ್ಟೇ ಸತ್ಯ. ಎಲ್ಲ ನಾಯಕರೂ ಒಗಟ್ಟಾಗಿ ಹೋಗುತ್ತಿದ್ದೇವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆದು, ಆ ಐದು ವರ್ಷಗಳನ್ನೂ ಪೂರೈಸುತ್ತೇವೆ. ತಿಮ್ಮಾಪೂರ ಅವರು ಭ್ರಮೆಯಿಂದ ಹೊರಬರಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.