ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇದೆ. ಆದರೆ, ಡಿಸೆಂಬರ್ ತಿಂಗಳಲ್ಲಿ ನನಗೆ ಯಾವ ಹುದ್ದೆ ಕೊಡುತ್ತಾರೆ ಎನ್ನುವುದು ಗೊತ್ತಿಲ್ಲ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
'ಕತ್ತಿ ಅವರಿಗೆ ಹುದ್ದೆ ಸಿಗಲು ಡಿಸೆಂಬರ್ ಕೊನೆವರೆಗೆ ಕಾಯಿರಿ' ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಕತ್ತಿ, ರಾಜ್ಯದಲ್ಲಿ ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಹೀಗಿರುವಾಗ, ನನಗೆ ಯಾವ ದೊಡ್ಡ ಹುದ್ದೆ ನೀಡುವರೋ? ಅದು ದೇಶದೊಳಗೇ ಇದ್ದರೆ ಒಳ್ಳೆಯದು. ಅಮೆರಿಕ ಸೇರಿ ವಿದೇಶದಲ್ಲಿ ಇರಬಾರದು' ಎಂದು ವ್ಯಂಗ್ಯವಾಡಿದರು.
'ನನಗೂ ಸಚಿವನಾಗುವ ಯೋಗ್ಯತೆ ಇದೆ. ಇದಕ್ಕಾಗಿ ಯಾರ ಜೊತೆಗೂ ಮನಸ್ತಾಪವಿಲ್ಲ' ಎಂದರು.
‘ಅವಕಾಶ ಸಿಕ್ಕರೆ ಉಮೇಶ ಕತ್ತಿ ಮುಖ್ಯಮಂತ್ರಿ ಆಗಲಿದ್ದಾರೆ’ ಎಂಬ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಆ ಅಧಿಕಾರ ಸಿಗಲು ಹಣೆಯಲ್ಲಿ ಬರೆದಿರಬೇಕು. ಅವಕಾಶ ಸಿಕ್ಕರೆ ನಾನೂ ಮುಖ್ಯಮಂತ್ರಿ ಆಗಲು ಸಿದ್ಧನಿದ್ದೇನೆ. ಒಂದು ವೇಳೆ ಅಂತಹ ಪ್ರಸಂಗ ಬಂದರೆ ನಿಮ್ಮನ್ನು (ಪತ್ರಕರ್ತರನ್ನು) ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕರೆದೊಯ್ಯುವೆ' ಎಂದು ಹಾಸ್ಯಚಟಾಕಿ ಹಾರಿಸಿದರು.
'ನೆರೆ ಪರಿಹಾರ ಕಾರ್ಯವನ್ನು ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ನನಗೆ ಯಾವುದೇ ಕ್ಷೇತ್ರದ ಉಸ್ತುವಾರಿ ನೀಡಿಲ್ಲ. ಏನೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುವೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.