ADVERTISEMENT

ಎಂಇಎಸ್‌, ಶಿವಸೇನಾ ಮುಖಂಡರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 5:58 IST
Last Updated 5 ಡಿಸೆಂಬರ್ 2023, 5:58 IST
   

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲ್ಲೂಕಿನ ಶಿನೋಳಿಯ ಬೆಳಗಾವಿ–ವೆಂಗುರ್ಲಾ ರಸ್ತೆಯಲ್ಲಿ ಸುಮಾರು 3 ತಾಸು ಪ್ರತಿಭಟನೆ ನಡೆಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನಾ(ಉದ್ಧವ್ ಠಾಕ್ರೆ ಬಣ) ಮುಖಂಡರ ವಿರುದ್ಧ ಚಂದಗಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ‘ಮಹಾಮೇಳಾವ್‌’ ನಡೆಸಲು ಎಂಇಎಸ್‌ ಮುಂದಾಗಿತ್ತು. ಆದರೆ, ನಗರ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಶಿನೋಳಿಯಲ್ಲಿ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಿದರು. 2 ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಂದಗಡ ಪೊಲೀಸ್‌ ಇನ್‌ಸ್ಪೆಕ್ಟರ್‌ ನಿತಿನ ಸಾವಂತ, ‘ಮೂರು ತಾಸು ರಸ್ತೆ ತಡೆ ನಡೆಸಿದ್ದರಿಂದ ಸಾರ್ವಜನಿಕರಿಗೆ ಅನಾನುಕೂಲವಾಯಿತು. ಸಂಚಾರ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮವಾಯಿತು. ಹಾಗಾಗಿ ಎಂಇಎಸ್‌ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ್‌, ಪ್ರಕಾಶ ಮರಗಾಳೆ, ಶುಭಂ ಶೆಳಕೆ, ಸರಿತಾ ಪಾಟೀಲ, ಶಿವಸೇನಾ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೇವನೆ ಸೇರಿದಂತೆ 40 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ’ ಎಂದರು.

ADVERTISEMENT

ಬೆಳಗಾವಿಯಲ್ಲಿ ಮಹಾಮೇಳಾವ್‌ಗೆ ಅನುಮತಿ ಸಿಗದ್ದರಿಂದ ಮಹಾರಾಷ್ಟ್ರದತ್ತ ಮುಖಮಾಡಿದ್ದ ಎಂಇಎಸ್‌ಗೆ, ಅಲ್ಲಿಯೂ ಹೋರಾಟಕ್ಕೆ ಜನಬೆಂಬಲ ಸಿಕ್ಕಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.