ADVERTISEMENT

ಜಾತಿ ಮುಕ್ತ ಭಾರತ ಕಟ್ಟಬೇಕಿದೆ: ಸತೀಶ

‘ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ: ಬಿ.ಆರ್.ಅಂಬೇಡ್ಕರ್’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 3:14 IST
Last Updated 1 ಮಾರ್ಚ್ 2026, 3:14 IST
ಬೆಳಗಾವಿಯ ಬಿ.ಎಸ್‌.ಜೀರಗೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು
ಬೆಳಗಾವಿಯ ಬಿ.ಎಸ್‌.ಜೀರಗೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು   

ಬೆಳಗಾವಿ: ‘ಇಂದು ನಾವೆಲ್ಲರೂ ಸೇರಿ ಜಾತಿ ಮುಕ್ತ ಭಾರತ ಕಟ್ಟಬೇಕಿದೆ. ಬಿ.ಆರ್.ಅಂಬೇಡ್ಕರ್, ಬಸವಣ್ಣ ಅವರಂಥ ಮಹನೀಯರ ವಿಚಾರಧಾರೆಗಳು, ನೈತಿಕ ತತ್ವಗಳು ಪ್ರತಿ ಮನೆ ತಲುಪಬೇಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ  ಜಾರಕಿಹೊಳಿ ಅಭಿಪ್ರಾಯಪಟ್ಟರು.

ಇಲ್ಲಿನ ಬಿ.ಎಸ್‌.ಜೀರಗೆ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜಕಾರ್ಯ ವಿಭಾಗ, ಸಮಾಜಕಲ್ಯಾಣ ಇಲಾಖೆಯ ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ: ಬಿ.ಆರ್.ಅಂಬೇಡ್ಕರ್’ ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನದ  ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಜದ ಒಳಿತಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟು, ತಾರತಮ್ಯ ಹೋಗಲಾಡಿಸಲು ಶ್ರಮಿಸಿದ ಮಹನೀಯರನ್ನು ಪರಿಚಯಿಸುವ ಕಠಿಣ ಕಾಲ ಇಂದು ಎದುರಾಗಿದೆ. ಹಾಗಾಗಿ ‘ನಾವೆಲ್ಲರೂ ಒಂದೇ’ ಎಂಬ ಸಂದೇಶವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲೇ ಮಕ್ಕಳ ಮನದಲ್ಲಿ ಬಿತ್ತಬೇಕಿದೆ’ ಎಂದು ಸಲಹೆ ನೀಡಿದರು.
‘ಅಂಬೇಡ್ಕರ್ ತಿಳಿದುಕೊಳ್ಳುವ ಕೂತಹಲ ಪ್ರತಿ ವಿದ್ಯಾರ್ಥಿಯಲ್ಲಿ ಇರುತ್ತದೆ. ಹಾಗಾಗಿ ಇಂಥ ವಿಶೇಷ ಕಾರ್ಯಕ್ರಮಗಳು ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರತಿವರ್ಷ ಜರುಗಬೇಕಿದೆ’ ಎಂದು ಹೇಳಿದರು.

ADVERTISEMENT

ಚಿಂತಕ ರಾಜಪ್ಪ ದಳವಾಯಿ, ‘ವೈಚಾರಿಕ ತಳಹದಿಯಲ್ಲಿ ರಚನೆಯಾದ ನಮ್ಮ ದೇಶದ ಸಂವಿಧಾನವು ಸಾಮಾಜಿಕ ಪ್ರಜ್ಞೆಯ ಧ್ಯೋತಕವಾಗಿದೆ. ನಾವು ಜಾತಿ ಚೌಕಟ್ಟು ಮೀರಿ ಬೆಳೆಯಬೇಕಿದೆ’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಪ್ರೊ.ಜೆ. ಸೋಮಶೇಖರ, ‘ಈಗಿನ ಕಾಲಘಟ್ಟದಲ್ಲಿ ಜ್ಞಾನ ತುಂಬಿದ ಸಮಾಜವನ್ನು ನಿರ್ಮಿಸುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.

ಶಾಸಕ ಆಸಿಫ್ ಸೇಠ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎನ್.ಪಾಟೀಲ, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ, ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ ಉಪಸ್ಥಿತರಿದ್ದರು. ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಸ್ವಾಗತಿಸಿದರು. ಕುಲಸಚಿವ ಸಂತೋಷ ಕಾಮಗೌಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.