ADVERTISEMENT

ಉಪಜಾತಿ ಮುಂದಿನ ಕ್ರೈಸ್ತ ಪದ ತೆಗೆಯಿರಿ:ವಿವಿಧ ಜಾತಿಗಳ ಮುಖಂಡರ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 2:43 IST
Last Updated 18 ಸೆಪ್ಟೆಂಬರ್ 2025, 2:43 IST
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಬುಧವಾರ ನಡೆದ 46 ಉಪ ಜಾತಿಗಳ ಮುಖಂಡರ ಸಭೆಯಲ್ಲಿ ಎಂ.ಬಿ.ಝಿರಲಿ ಮಾತನಾಡಿದರು  ಪ್ರಜಾವಾಣಿ ಚಿತ್ರ
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಬುಧವಾರ ನಡೆದ 46 ಉಪ ಜಾತಿಗಳ ಮುಖಂಡರ ಸಭೆಯಲ್ಲಿ ಎಂ.ಬಿ.ಝಿರಲಿ ಮಾತನಾಡಿದರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ಸಮುದಾಯಗಳ ಭಾವನೆಗೆ ಬೆಲೆ ಕೊಟ್ಟು ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಬೇಕು. ಇಲ್ಲದಿದ್ದರೆ ಸಮೀಕ್ಷೆಯನ್ನೇ ಬಹಿಷ್ಕಾರ ಮಾಡಲಾಗುವುದು ಎಂದು ವಿವಿಧ 46 ಜಾತಿಗಳ ಮುಖಂಡರ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಈ ಬಗ್ಗೆ ನಿರ್ಣಯದ ಪ್ರತಿಯನ್ನು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರಿಗೆ ಸಲ್ಲಿಸಲಾಯಿತು. ಮನವಿ ಪಡೆದ ಜಿಲ್ಲಾಧಿಕಾರಿ ಅದನ್ನು ರಾಜ್ಯಪಾಲರ ಕಚೇರಿಗೆ ತಲುಪಿಸುವುದಾಗಿ ಹೇಳಿದರು.

ಹಿಂದೂ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಲಿಂಗಾಯತ, ಬ್ರಾಹ್ಮಣ, ಕುರುಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಕ್ಕಲಿಗ, ರೆಡ್ಡಿ, ಅಂಬಿಗ, ಹೂಗಾರ ಸೇರಿದಂತೆ ಒಟ್ಟು 46 ಜಾತಿಗಳ ಮುಖಂಡರ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧರಿಸಲಾಯಿತು.

ADVERTISEMENT

ಸರ್ಕಾರ ನಡೆಸಲು ಉದ್ದೇಶಿಸುರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಎಲ್ಲ ಸಮುದಾಯಗಳ ಉಪಜಾತಿಯ ಹಿಂದೆ ಕ್ರೈಸ್ತ ಎಂಬ ಧರ್ಮದ ಪದ ಸೇರಿಸಲಾಗಿದೆ. ಇದು ರಾಜ್ಯ ಸರ್ಕಾರ ನಡೆಸಿದ ದೊಡ್ಡ ಹುನ್ನಾರ. ಈ ದೇಶದ ಉಪಜಾತಿಗಳಿಗೂ ಹೊರಗಡೆಯಿಂದ ಬಂದ ಕ್ರೈಸ್ತ ಧರ್ಮೀಯರಿಗೂ ಏನು ಸಂಬಂಧ? ಸಾವಿರಾರು ವರ್ಷಗಳಿಂದ ಗುರುತಿಸಿಕೊಂಡು ಬಂದ ಜಾತಿಗಳನ್ನೂ ಸುಳ್ಳು ಮಾಡಿ ಕ್ರೈಸ್ತರಿಗೆ ಸಂಬಂಧ ಎಂಬಂತೆ ಬಿಂಬಿಸಲಾಗುತ್ತಿದೆ ಎಂದೂ ಕೆಲ ಮುಖಂಡರು ಆಕ್ರೋಶ ಹೊರಹಾಕಿದರು.

ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ವಿವಿಧ ಸಮುದಾಯಗಲ್ಲಿ ಉಪ ಜಾತಿಗಳ ಧಾರ್ಮಿಕ ಆಚರಣೆಗಳು ಸಾವಿರಾರೂ ವರ್ಷಗಳ ಇತಿಹಾಸ ಹೊಂದಿವೆ. ನಮ್ಮಲ್ಲಿ ಜಾತಿಗಳು ಬೇರೆ ಬೇರೆಯಾಗಿರಬಹುದು. ಆದರೆ, ಧಾರ್ಮಿಕ ಆಚರಣೆ, ವಿಚಾರಣೆಗಳ ಮೂಲ ಹಿಂದೂ ಧರ್ಮದ ಸಂಸ್ಕೃತಿ. ಏಕಾಏಕಿ ಹಿಂದುಳಿದ ವರ್ಗಗಳ ಆಯೋಗವು ಎಲ್ಲ ಸಮುದಾಯ ಉಪಜಾತಿಗಳಲ್ಲಿ ಕ್ರೈಸ್ತ ಎಂಬ ಹೊಸ ಉಪಜಾತಿ ಸೃಷ್ಟಿಸಿ ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ವಿಷಯದಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಹೋರಾಟ ಮಾಡಲು ನಾವೆಲ್ಲ ಬದ್ಧರಾಗಿದ್ದೇವೆ. ಆಯೋಗ ತನ್ನ ನಿರ್ಧಾರ ಬದಲಿಸಲಿದ್ದಾರೆ ಕಾನೂನು ಹೋರಾಟದ ಜತೆಗೆ ಸಮೀಕ್ಷೆ ಬಹಿಷ್ಕರ ಹಾಕಲಾಗುವುದು ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಮುಖಂಡ ಎಂ.ಬಿ.ಝಿರಲೆ, ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ ಒಮ್ಮತದ ನಿರ್ಣಯ ಕೈಗೊಂಡರು.

ಮೇಯರ್ ಮಂಗೇಶ ಪವಾರ್‌, ಉಪಮೇಯರ್ ವಾಣಿ ಜೋಶಿ, ವಿವಿಧ ಸಮುದಾಯಗಳ ಮುಖಂಡರಾದ ವಿನೋದ ದೊಡ್ಡಣ್ಣವರ, ಈರಣ್ಣ ದಯಾನಂದ, ಸಂದೀಪ ಜೀರಗ್ಯಾಳ, ರೋಹನ್ ಜವಳಿ, ಹಣಮಂತ ಕೊಂಗಾಲಿ, ಆರ್.ಎಸ್.ಮುತಾಲಿಕ್, ಮುರೇಂದ್ರಗೌಡ ಪಾಟೀಲ ಸೇರಿದಂತೆ ವಿವಿಧ ಮಠಾಧೀಶರೂ ವೇದಿಕೆ ಮೇಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.