ಚಿಕ್ಕೋಡಿ: ಪಡ್ಡೆ ಹುಡುಗರು ತಮ್ಮ ಬೈಕ್ಗಳಿಗೆ ಮಾಡುವ ಅಲಂಕಾರಗಳಿಗೆ ಮಿತಿ ಇಲ್ಲ. ಮೋಟಾರ್ ಸೈಕಲ್ ನಂಬರ್ ಪ್ಲೇಟ್ನಲ್ಲಿ ತರಹೇವಾರಿ ಡೈಲಾಗ್ಗಳ ಗಮ್ಮತ್ತು, ಕನ್ನಡಿಗಳನ್ನೇ ಅಂದಗೊಳಿಸುವ ವೈಖರಿ, ವಿವಿಧಾಕೃತಿಗಳ ಹ್ಯಾಂಡಲ್ಗಳ ಅಳವಡಿಕೆ. ಹೀಗೆ ನಾನಾ ತರಹಗಳಲ್ಲಿ ಬೈಕ್ಗಳನ್ನು ಸಿಂಗರಿಸಿಕೊಂಡು ಸಂಭ್ರಮಿಸುವುದನ್ನು ಕಂಡಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ತನ್ನ ಬೈಕ್ ಮೇಲೆ ಶಿವಾಜಿ ಮಹಾರಾಜರ ರಾಯಗಢ ಕೋಟೆಯ ಪ್ರತಿಕೃತಿ ರಚಿಸಿ ಗಮನ ಸೆಳೆದಿದ್ದಾರೆ.
ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದ ಘೋಡಕೆವಾಡಿಯ ಯುವಕ ಜಯವಂತ ಮಾನೆ ಈ ಪ್ರಯೋಗ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಜೂನ್ 6ರಂದು ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಕಾರ್ಯಕ್ರಮವನ್ನು ವೈಭವದಿಂದ ಆಚರಿಸುತ್ತಾರೆ. ರಾಯಗಢದ ಕೋಟೆಯಲ್ಲಿ ಕಾರ್ಯಕ್ರಮವನ್ನು ಇನ್ನೂ ವಿಶೇಷವಾಗಿ ಆಚರಿಸುತ್ತಾರೆ. ಸುತ್ತಮುತ್ತಲಿನ ಜನರು ಈ ಕಾರ್ಯಕ್ರಮ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಬಾರಿಯ ರಾಜ್ಯಾಭಿಷೇಕ ಕಾರ್ಯಕ್ರಮದಲ್ಲಿ ಜಯವಂತ ಮಾನೆ ಅವರ ಸ್ಕೂಟಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಸ್ಕೂಟಿಯ ಮೇಲೆ ಕೋಟೆಯ ಪ್ರತಿಕೃತಿ ರಚಿಸಲು ಅವರು ₹ 8,000 ವೆಚ್ಚ ಮಾಡಿದ್ದಾರೆ.
ಜನರು ತಮ್ಮ- ತಮ್ಮ ವಾಹನಗಳ ಮೇಲೆ ದೇವರ ಅಥವಾ ತಮ್ಮ ಬಂಧು ಬಳಗದವರ ಹೆಸರನ್ನು ಬರೆಯಿಸುತ್ತಾರೆ. ಆದರೆ, ಜಯವಂತ ಅವರ ರೀತಿಯಲ್ಲಿ ಯಾರೂ ಮಾಡಿಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೋಟೆ ಮಾದರಿಯ ವಾಹನವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುಧಾಕರ ತಳವಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.