ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಮಂಗಳೂರು ಹಾಗೂ ರಾಯಬಾಗ ತಾಲ್ಲೂಕಿನ ಚಿಂಚಲಿ ತಂಡಗಳು, ಇಲ್ಲಿ ಕಿತ್ತೂರು 200ನೇ ವಿಜಯೋತ್ಸವ ಪ್ರಯುಕ್ತ ಗುರುವಾರ ನಡೆದ ರಾಜ್ಯಮಟ್ಟದ ಮಹಿಳೆಯರ ವಿಭಾಗದ ವಾಲಿಬಾಲ್ ಮತ್ತು ಕಬಡ್ಡಿ ಟೂರ್ನಿಗಳಲ್ಲಿ ಕ್ರಮವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದವು.
ಬೆಳಗಾವಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಂಡದ ವಿರುದ್ಧ ನಡೆದ ವಾಲಿಬಾಲ್ ಫೈನಲ್ನಲ್ಲಿ ಮಂಗಳೂರಿನ ಮಂಗಳಾ ಕ್ಲಬ್ ತಂಡವು ಮೊದಲಾರ್ಧದಲ್ಲಿ 15-7 ಅಂಕಗಳ ಮೂಲಕ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ತೋರಿ 15-9 ಅಂಕಗಳ ಮೂಲಕ ಗೆಲುವು ಕಂಡಿತು. ಮಂಗಳೂರು ತಂಡದ ಪರವಾಗಿ ಹಬೀಬಾ ಉತ್ತಮ ಪ್ರದರ್ಶನ ನೀಡಿದರು.
ಬೆಳಗಾವಿ ತಾಲ್ಲೂಕಿನ ದೇಸೂರ ತಂಡದ ವಿರುದ್ಧದ ಕಬಡ್ಡಿ ಫೈನಲ್ ಪಂದ್ಯದಲ್ಲಿ ಚಿಂಚಲಿ ತಂಡವು ಮೊದಲಾರ್ಧದಲ್ಲಿ 11–1 ಅಂಕ ಗಳಿಕೆ ಮೂಲಕ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ದ್ವಿತೀಯಾರ್ಧದಲ್ಲಿ ದೇಸೂರ ತಂಡ ಪ್ರತ್ಯುತ್ತರವಾಗಿ ಉತ್ತಮ ಪ್ರದರ್ಶನ ನೀಡಿತಾದರೂ, ಅಂತಿಮವಾಗಿ 15–10 ಅಂಕಗಳಿಂದ ಪರಾಭವಗೊಂಡಿತು.
ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬೆಳಗಾವಿ ತಂಡವು ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ತಂಡದ ವಿರುದ್ಧ ಗೆದ್ದರೆ, ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಕಿತ್ತೂರು ತಾಲ್ಲೂಕಿನ ಅವರಾದಿ ತಂಡವು ಕಿಟದಾಳ ತಂಡದ ವಿರುದ್ಧ ಗೆದ್ದಿತು.
ಕಿತ್ತೂರು ವಿಜಯೋತ್ಸವ ಅಂಗವಾಗಿ ಚನ್ನಮ್ಮನ ಕಿತ್ತೂರಿನಲ್ಲಿ ಗುರುವಾರ ನಡೆದ ಮಹಿಳೆಯರ ವಿಭಾಗದ ರಾಜ್ಯಮಟ್ಟದ ಕಬಡ್ಡಿಯಲ್ಲಿ ದೇಸೂರು ತಂಡದ ಆಟಗಾರ್ತಿ ಚಿಂಚಲಿ ತಂಡದ ಮೇಲೆ ದಾಳಿ ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.