ADVERTISEMENT

ಬೆಳಗಾವಿ | ಗರ್ಭಕಂಠದ ಕ್ಯಾನ್ಸರ್‌: ಕಾರ್‌ ರ್‍ಯಾಲಿ ಇಂದು

50 ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ, ದೇಶದಾದ್ಯಂತ ಜಾಗೃತಿ ರ್‍ಯಾಲಿ ಆರಂಭಿಸಿದ ಪ್ರಿಯಾ ರಾಜಪಾಲ್ ತಂಡ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 2:53 IST
Last Updated 18 ಆಗಸ್ಟ್ 2025, 2:53 IST
ಡಾ.ಗೋವಿಂದ ಮಿಸಾಳೆ
ಡಾ.ಗೋವಿಂದ ಮಿಸಾಳೆ   

ಬೆಳಗಾವಿ: ‘ಗರ್ಭಕಂಠದ ಕ್ಯಾನ್ಸರ್‌ ಹಾಗೂ ಅದರ ಲಸಿಕೆ ಕುರಿತಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆ.18ರಂದು ಕಾರ್‌ ರ್‍ಯಾಲಿ ಹಾಗೂ ಉಚಿತ ಲಸಿಕಾ ಶಿಬಿರ ಆಯೋಜಿಸಲಾಗಿದೆ’ ಎಂದು ರೋಟರಿ ಕ್ಲಬ್‌ ದಕ್ಷಿಣದ ಅಧ್ಯಕ್ಷ ಡಾ.ಗೋವಿಂದ ಮಿಸಾಳೆ ಹೇಳಿದರು.

‘ವರ್ಷದಿಂದ ವರ್ಷಕ್ಕೆ ಮಹಿಳೆಯರಲ್ಲಿ ಕರ್ಭಕಂಠದ ಕ್ಯಾನ್ಸರ್‌ ಹೆಚ್ಚುತ್ತ ಸಾಗಿದೆ. ದೇಶದಾದ್ಯಂತ ನಡೆಯುತ್ತಿರುವ ಗರ್ಭಕಂಠದ ಕ್ಯಾನ್ಸರ್ ಸಂಬಂಧಿತ ಎಚ್‌ಪಿವಿ ಲಸಿಕೆ ಅಭಿಯಾನಕ್ಕೆ ರೋಟರಿ ಕ್ಲಬ್ ದಕ್ಷಿಣ, ರೋಟರಿ ಇ ಕ್ಲಬ್ ಮತ್ತು ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪಣ ಕೂಡ ಕೈ ಜೋಡಿಸಿವೆ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ಮುಂಬೈನ ರೋಟರಿ ಪರಿವಾರದ ಪ್ರಿಯಾ ರಾಜಪಾಲ್ ಅವರ ತಂಡ ಗರ್ಭಕಂಠ ಕ್ಯಾನ್ಸರ್‌ ಕುರಿತು ದೇಶದಾದ್ಯಂತ ಅರಿವು ಮೂಡಿಸಲು ಮುಂದಾಗಿದೆ. ಕಳೆದ 40 ದಿನಗಳಿಂದ 15 ಸಾವಿರ ಕಿ.ಮೀ ಕ್ರಮಿಸಿ, 15 ರಾಜ್ಯಗಳನ್ನು ಈ ತಂಡ ಸುತ್ತಿದೆ. ಆ.18ರಂದು ಬೆಳಗಾವಿಗೆ ಈ ತಂಡ ಬರುತ್ತಿದ್ದು, ಬೋಗಾರವೇಸ್ ಹನುಮಾನ್‌ ಪ್ರತಿಮೆ ಬಳಿಯಿಂದ ಆರ್‌ಪಿಡಿ ವೃತ್ತದವರೆಗೆ ನಡೆಯಲಿದೆ. ಸಂಜೆ 5.30ಕ್ಕೆ ಗಣ್ಯರು ಚಾಲನೆ ನೀಡುವರು’ ಎಂದರು.

ADVERTISEMENT

‘ಇಲ್ಲಿನ ಆರ್‌ಪಿಡಿ ವೃತ್ತದ ಬಳಿ ಇರುವ ಉದಯ ಭವನ ಎದುರಿನ, ಡಾ.ಅನಿತಾ ಉಮದಿ ಅವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆ 10ರಿಂದ ಉಚಿತ ಲಸಿಕೆ ಹಾಕಲಾಗುವುದು. 50 ಎಪ್‌ಪಿವಿ ಲಸಿಕೆಗಳ ಉಚಿತವಾಗಿ ಲಭಿಸಿವೆ. ಅವುಗಳಿಗಾಗಿ ಈಗಾಗಲೇ 9ರಿಂದ 20 ವರ್ಷದೊಳಗಿನ 50 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ಡಾ.ಅನಿತಾ ಉಮದಿ ಮಾತನಾಡಿ, ‘ಭವಿಷ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈಗಿನಿಂದಲೇ 9ರಿಂದ 20ವರ್ಷದೊಳಗಿನ ಬಾಲಕಿಯರಿಗೆ ಈ ಲಸಿಕೆ ನೀಡಬೇಕಿದೆ. ಈ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ’ ಎಂದರು.

ಕ್ಲಬ್‌ಗಳ ಮುಖಂಡರಾದ ಕವಿತಾ ಕನಗನ್ನಿ, ವಿಜಯಲಕ್ಷ್ಮೀ ಮಣ್ಣಿಕೇರಿ, ಡಾ.ಸಂಜೀವ ನಾಯಕ, ಡಾ.ಸ್ಪೂರ್ತಿ ಮಾಸ್ತಿಹೊಳಿ, ಸತೀಶ ಕುಲಕರ್ಣಿ ಇತರರು ಇದ್ದರು.

ಮಹಾರಾಷ್ಟ್ರ ಸರ್ಕಾರ ಈ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ. ಕರ್ನಾಟಕದಲ್ಲಿಯೂ ಉಚಿತವಾಗಿ ನೀಡಿದರೆ ಭವಿಷ್ಯದ ಹೆಣ್ಣು ಮಕ್ಕಳನ್ನು ಸರ್ಕಾರ ಕಾಪಾಡಿದಂತಾಗುತ್ತದೆ
ಡಾ.ಅನಿತಾ ಉಮದಿ ವೈದ್ಯೆ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.