ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರು: ‘ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಅವರು ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ’ ಎಂದು ರಾಷ್ಟ್ರೀಯ ಬಸವದಳದ ಕಾರ್ಯಕರ್ತ ಅಶೋಕ ಅಳ್ನಾವರ ತಿಳಿಸಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ನಡೆದ ಪ್ರತಿಭಟನೆ ವೇಳೆ ಸಂದೀಪ ಅವರು ಬಸವಣ್ಣನವರ ವಚನವನ್ನು ವ್ಯಂಗ್ಯವಾಗಿ ಹೇಳಿದ್ದರು. ಹಾಗಾಗಿ, ರಾಷ್ಟ್ರೀಯ ಬಸವ ದಳದಿಂದ ಅವರು ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
‘ಅವರು ಕ್ಷಮೆ ಕೇಳಬೇಕೆಂಬುದೇ ನಮ್ಮ ಬೇಡಿಕೆಯಾಗಿತ್ತು. ಬಸವ ಅಭಿಮಾನಿಗಳ ಭಾವನೆಗೆ ಅವರು ಸ್ಪಂದಿಸಿದ್ದಾರೆ’ ಎಂದು ಬಸವರಾಜ ಕಡೇಮನಿ ಹೇಳಿದರು.
‘ನಾನೂ ಬಸವಾಭಿಮಾನಿ’: ಇದಕ್ಕೂ ಮೊದಲು ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದ ಸಂದೀಪ ದೇಶಪಾಂಡೆ, ‘ನನ್ನ ಹೇಳಿಕೆಯನ್ನು ರಾಜಕೀಯಕ್ಕೆ ಆಹಾರವಾಗಿಸುವುದು ಬೇಡ. ಇದನ್ನು ಮುಂದುವರಿಸುವುದೂ ಬೇಡ. ಈ ಬಗ್ಗೆ ಕ್ಷಮೆ ಕೇಳಿದ್ದೇನೆ. ಇದನ್ನು ಮುಕ್ತಾಯಗೊಳಿಸಬೇಕು’ ಎಂದು ಮನವಿ ಮಾಡಿದರು.
‘ನನ್ನ ಹೃದಯದಲ್ಲೂ ಬಸವಣ್ಣ ಇದ್ದಾನೆ. ನಾನು ಅನೇಕ ವಚನಗಳನ್ನು ಹಾಡಿದ್ದೇನೆ. ನನಗೂ ಅಭಿಮಾನವಿದೆ’ ಎಂದರು.
ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ‘ಬಸವ ದಳದ ಕಾರ್ಯಕರ್ತರು ಪತ್ರಿಕಾಗೋಷ್ಠಿ ಬಗ್ಗೆ ನನಗೆ ತಿಳಿಸಿಲ್ಲ. ಸಮಾಜ ಇಬ್ಭಾಗ ಆಗುವುದು ಬೇಡ’ ಎಂದು ತಿಳಿಸಿದರು.
ಬಸವರಾಜ ಪರವಣ್ಣವರ, ಶಿವಾನಂದ ಹನುಮಸಾಗರ, ಅಜ್ಜಪ್ಪ ನೇಗಿನಹಾಳ, ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಸಿದ್ರಾಮನಿ, ನಿಂಗಪ್ಪ ಹಣಜಿ, ರಾಯಪ್ಪ ಹಣಜಿ, ಕಿರಣ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.