ADVERTISEMENT

ಶಿಶು ಅಭಿವೃದ್ಧಿ ಯೋಜನೆ|ಅನುದಾನ ಹೆಚ್ಚಿಸಿ: ಕೇಂದ್ರ ಸರ್ಕಾರಕ್ಕೆ ವರಲಕ್ಷ್ಮಿಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 12:25 IST
Last Updated 17 ಸೆಪ್ಟೆಂಬರ್ 2019, 12:25 IST

ಬೆಳಗಾವಿ: ‘ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಜಾರಿಗೊಳಿಸಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಮತ್ತಷ್ಟು ಶಕ್ತಗೊಳಿಸಬೇಕು. ಅನುದಾನದ ಪ್ರಮಾಣ ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಬಲಹೀನಗೊಳಿಸಬಾರದು’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಅಧ್ಯಕ್ಷೆ ಎಸ್. ವರಲಕ್ಷ್ಮಿ ಆಗ್ರಹಿಸಿದರು.

ಇಲ್ಲಿ ಮಂಗಳವಾರ ನಡೆದ ವಿಭಾಗಮಟ್ಟದ ಸಂಘಟನಾ ಕಾರ್ಯಾಗಾರದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲಸದ ಅವಧಿ ಹೆಚ್ಚಿಸಿದಂತೆ ವೇತನವನ್ನೂ ಏರಿಸಬೇಕು. ಅನುದಾನವನ್ನೂ ಒದಗಿಸಬೇಕು. ಆದರೆ, ಕೇಂದ್ರ ಬಜೆಟ್‌ ಕಡಿತಗೊಳಿಸುತ್ತಿರುವುದು ಸರಿಯಲ್ಲ’ ಎಂದು ತಿಳಿಸಿದರು.

ADVERTISEMENT

ಅನುದಾನ ನೀಡುತ್ತಿಲ್ಲ:

‘ರಾಜ್ಯದ ಹೊಸ ಸರ್ಕಾರವಾದರೂ ಐಸಿಡಿಎಸ್ ಪರಿಣಾಮಕಾರಿ ಜಾರಿಗೆ ಕ್ರಮ ಕೈಗೊಳ್ಳಬೇಕು. ಅಗತ್ಯ ಸಹಕಾರ ಕೊಡಲು ಸಿದ್ಧವಿದ್ದೇವೆ’ ಎಂದರು.

‘ಕೇಂದ್ರವು ಪೋಷಣ್ ಅಭಿಯಾನ ಹಾಗೂ ಮಾತೃವಂದನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದರಿಂದ, ಅಂಗನವಾಡಿಗಳ ನೌಕರರಿಗೆ ಕೆಲಸದ ಒತ್ತಡ ಹೆಚ್ಚಿಸುತ್ತಿದೆ. ಹೊಸ ಯೋಜನೆಗೆ ಅನುದಾನವನ್ನೂ ಬಿಡುಗಡೆ ಮಾಡುತ್ತಿಲ್ಲ’ ಎಂದು ದೂರಿದರು.

‘ಕೆಲವು ನೌಕರರಿಗೆ 6 ತಿಂಗಳಾದರೂ ವೇತನ ಬಂದಿಲ್ಲ. ತಾಂತ್ರಿಕ ಸಮಸ್ಯೆ ಎಂದು ಹೇಳುತ್ತಿದ್ದಾರೆ. ತರಕಾರಿ ಹಾಗೂ ಮೊಟ್ಟೆಯ ಹಣವನ್ನೂ ಕೊಡುತ್ತಿಲ್ಲ. ಮಾತೃಪೂರ್ಣ ಯೋಜನೆಗೆ ಪ್ರತ್ಯೇಕ ಹಣವನ್ನೇ ಕೊಟ್ಟಿಲ್ಲ. ಯಾವುದೇ ಸಚಿವರು, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುವ ಮುನ್ನ ಅಲ್ಲಿನ ಖರ್ಚುಗಳಿಗೆ ಬಿಡುಗಡೆ ಮಾಡಲಾಗಿದೆ ಎನ್ನುವುದನ್ನು ಪರಿಶೀಲಿಸಬೇಕು. ಕೇಂದ್ರವು ₹ 1,500 ವೇತನ ಹೆಚ್ಚಿಸಿ ಆದೇಶಿಸಿದೆ. ಆದರೆ, ಈವರೆಗೂ ಜಾರಿಯಾಗಿಲ್ಲ. ಕೆಲಸದ ಸಮಯವು ನಾಲ್ಕೂವರೆ ಗಂಟೆಯಿಂದ ಆರೂವರೆಗೆ ಹೆಚ್ಚಾಗಿದೆ. 2018ರ ಅಕ್ಟೋಬರ್‌ನಿಂದ ₹18ಸಾವಿರ ಹಿಂಬಾಕಿ ಬರಬೇಕಾಗಿದೆ. ಆದರೂ ಕೆಲಸ ಕಾಯಂ ಮಾಡಬಹುದು ಎಂಬ ನಿರೀಕ್ಷೆಯಿಂದ ದುಡಿಯುತ್ತಿದ್ದೇವೆ. ನೂತನ ಮುಖ್ಯಮಂತ್ರಿ ಇತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ಡಿ.2ರಿಂದ ಜಾಥಾ:

‘ಹೊಸ ಶಿಕ್ಷಣ ನೀತಿ ಪ್ರಕಾರ, ಅಂಗನವಾಡಿಗಳ ಅಗತ್ಯದ ಬಗ್ಗೆ ಉಲ್ಲೇಖವಿಲ್ಲ. ಹೀಗಾಗಿ, ಐಸಿಡಿಎಸ್ ಯೋಜನೆ ಹಾಗೂ 28 ಲಕ್ಷ ಅಂಗನವಾಡಿ ನೌಕರರು ಅತಂತ್ರ ಸ್ಥಿತಿಯಲ್ಲಿದ್ದೇವೆ. ಇದರ ವಿರುದ್ಧ ದೊಡ್ಡ ಹೋರಾಟ ರೂಪಿಸಲಾಗುವುದು. ಡಿ. 2ರಿಂದ ಜಾಥಾ ನಡೆಸಲಾಗುವುದು’ ಎಂದು ತಿಳಿಸಿದರು.

‘ಅಂಗನವಾಡಿ ನೌಕರರಿಗೆ ಪ್ರಸ್ತುತ ₹8ಸಾವಿರ ವೇತನ ದೊರೆಯುತ್ತಿದೆ. ಕೇಂದ್ರದ 1,500 ಸೇರಿಸಿದರೆ ₹ 9,500 ಕೊಡಬೇಕಾಗುತ್ತದೆ. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ಘೋಷಿಸಿದ ₹ 500 ನವೆಂಬರ್‌ನಿಂದ ಅನ್ವಯವಾಗಲಿದೆ’ ಎಂದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಸಿಡಿಪಿಒ ಹುದ್ದೆಗಳು ಬಹಳಷ್ಟು ಕಡೆಗಳಲ್ಲಿ ಖಾಲಿ ಇವೆ. ಐಎಎಸ್ ಅಧಿಕಾರಿಗಳನ್ನು ಪದೇ ಪದೇ ಬದಲಿಸಲಾಗುತ್ತಿದೆ. ತಾಲ್ಲೂಕಿಗೆ ಒಬ್ಬರು ಮೇಲ್ವಿಚಾರಕರಷ್ಟೇ ಇದ್ದಾರೆ. ಹೀಗಾಗಿ, ಆಡಳಿತಾತ್ಮಕ ತೊಂದರೆಗಳು ಎದುರಾಗುತ್ತಿವೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ 1.20 ಲಕ್ಷ ನೌಕರರಿದ್ದೇವೆ. ಇಲಾಖೆಯವರು, ಸೀರೆಗಳನ್ನು ನೇಕಾರರ ಹೆಸರಲ್ಲಿ ಖರೀದಿಸುತ್ತಿದ್ದಾರೆ. ಆದರೆ, ನೇಕಾರರಿಂದ ಪಡೆಯುತ್ತಿಲ್ಲ. ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಕಲಿಸಲು ಅರೆಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಅವೈಜ್ಞಾನಿಕವಾಗಿದೆ. ಅಂಗನವಾಡಿ ನೌಕರರಿಗೇ ತರಬೇತಿ ಕೊಟ್ಟು ಬಳಸಿಕೊಳ್ಳಬೇಕು. ಅನ್ಯ ಕೆಲಸಗಳಿಂದ ಮುಕ್ತಗೊಳಿಸಬೇಕು. ಆಗ, ಸರ್ಕಾರಕ್ಕೆ ದೊಡ್ಡ ಮೊತ್ತ ಉಳಿಯುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ದೊಡ್ಡವ್ವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜೈನೇಖಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.