ಚಿಕ್ಕೋಡಿ: ತಾಲ್ಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ 10ನೇ ಪೀಠಾಧಿಕಾರಿಯಾಗಿ ಶಿವಪ್ರಸಾದ ದೇವರು ಅವರನ್ನು ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ನಡೆದ ಸಭೆಯಲ್ಲಿ ಚಿಂಚಣಿ ಮಠದ ನೂರಾರು ಭಕ್ತರ ಸಮ್ಮುಖದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ ಆಯ್ಕೆ ಮಾಡಿ ಘೋಷಿಸಿದರು.
ಹಾವೇರಿಯ ಹುಕ್ಕೇರಿ ಮಠದ ಮಠಾಧೀಶ, ಶಿವಯೋಗ ಮಂದಿರದ ಉಪಾಧ್ಯಕ್ಷ ಸದಾಶಿವ ಸ್ವಾಮೀಜಿ ಉತ್ತರಾಧಿಕಾರಿ ಪತ್ರವನ್ನು ಸಭೆಯಲ್ಲಿ ಓದಿದರು.
ಮಠದ 9ನೇ ಪೀಠಾಧಿಪತಿ ಅಲ್ಲಮಪ್ರಭು ಸ್ವಾಮೀಜಿ 2023ರ ನ. 12 ರಂದು ಲಿಂಗೈಕ್ಯರಾಗಿದ್ದರಿಂದ ತೆರವಾಗಿದ್ದ ಪೀಠಕ್ಕೆ ವಿಜಯಪುರ ಜಿಲ್ಲೆಯ ಯರನಾಳ ಗ್ರಾಮದ ಶಿವಪ್ರಸಾದ ದೇವರು ಅವರನ್ನು ಆಯ್ಕೆ ಮಾಡಲಾಗಿದೆ.
ತಂದೆ ಷಡಕ್ಷರಯ್ಯ, ತಾಯಿ ಶಶಿಕಲಾ. ಶಿವಪ್ರಸಾದ ಹಿರೇಮಠ ಅವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿ, ಬಾಗಲಕೋಟ ಜಿಲ್ಲೆಯ ಶಿವಯೋಗ ಮಂದಿರದಲ್ಲಿ ಐದು ವರ್ಷಗಳ ಕಾಲ ಯೋಗ, ಶಿವಯೋಗ, ವಚನ, ಸಂಗೀತ, ಸಾಹಿತ್ಯ ಪ್ರವಚನ, ಪೂಜೆ ಮುಂತಾದವುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಜಗದ್ಗುರು ಮೂರು ಸಾವಿರ ಮಠದ ಮಹಾವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.