ಬೆಳಗಾವಿ: ನಗರದ ಟಿಳಕವಾಡಿ ಮೊದಲ ರೈಲ್ವೆ ಗೇಟ್ ಬಳಿ ಅಳವಡಿಸಿರುವ ಬ್ಯಾರಿಕೇಡ್ ತೆರವುಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಅಲ್ಲಿನ ಚಿತ್ರಣದ 100 ಫೋಟೊಗಳನ್ನು ಒಳಗೊಂಡಿರುವ ದೊಡ್ಡದಾದ ಮನವಿ ಪತ್ರವನ್ನು ಅವರು ಸಲ್ಲಿಸಿದ್ದು ಗಮನಸೆಳೆಯಿತು.
‘ಅಲ್ಲಿ 2014ರ ಜೂನ್ 19ರಿಂದಲೂ ಸಂಚಾರ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ವಾಹನದಟ್ಟಣೆಯೂ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ನಿತ್ಯ ಲಕ್ಷಕ್ಕೂ ಹೆಚ್ಚು ಜನರು ಸಂಚರಿಸುತ್ತಾರೆ. ಹೀಗಾಗಿ ಬ್ಯಾರಿಕೇಡ್ ತೆರವುಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು. ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಮೇಲ್ಸೇತುವೆ ನಿರ್ಮಿಸಬೇಕು’ ಎಂದು ಹೋರಾಟಗಾರ ಸುಭಾಷ ಘೋಲಪ ತಿಳಿಸಿದರು.
‘ಬ್ಯಾರಿಕೇಡ್ ಹಾಕಿರುವುದರಿಂದಾಗಿ ಮಂಗಳವಾರ ಪೇಟೆ, ಸೋಮವಾರ ಪೇಟೆ, ಗುರುವಾರ ಪೇಟೆ, ಬುಧವಾರ ಪೇಟೆ, ರಾಯ್ ರಸ್ತೆ, ಮಂಡೋಳಿ ಮುಂತಾದ ಪ್ರದೇಶಗಳ ಜನರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಅನಧಿಕೃತ ಬ್ಯಾರಿಕೇಡ್ ತೆರವುಗೊಳಿಸಿ, ಅಗತ್ಯ ಬಿದ್ದರೆ ಸಂಚಾರ ಪೊಲೀಸರನ್ನು ನಿಯೋಜಿಸಬೇಕು. ಜನರು ಸುತ್ತಿಬಳಸಿ ಸಂಚರಿಸುವುದನ್ನು ತಪ್ಪಿಸಬೇಕು’ ಎಂದು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.