ಬೆಳಗಾವಿ: ತಾಲ್ಲೂಕಿನ ಕರಡಿಗುದ್ದಿ ಗ್ರಾಮದ ಹೊರವಲಯದಲ್ಲಿ ಎರಡು ಗುಂಪುಗಳ ನಡುವೆ ಗುರುವಾರ ಸಂಜೆ ನಡೆದ ಮಾರಾಮಾರಿಯಲ್ಲಿ ಒಬ್ಬ ಸಾವಿಗೀಡಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು ಸುಣಕುಂಪಿ ಗ್ರಾಮದ ಮುದಕಪ್ಪ ಚನ್ನಪ್ಪ ಅಂಗಡಿ (28) ಎಂದು ಗುರುತಿಸಲಾಗಿದೆ.
ಕರಡಿಗುದ್ದಿ ಗ್ರಾಮದ ಸುನೀಲ್ ಅರಬಳ್ಳಿ, ಬಸವರಾಜ ಅರಬಳ್ಳಿ, ವಿಠ್ಠಲ ಅರಬಳ್ಳಿ, ಮಾರಿಹಾಳದ ಲಕ್ಕಪ್ಪ ಅರಬಳ್ಳಿ ಮತ್ತು ಮಾರಿಹಾಳದ ಇಬ್ಬರು ಯುವಕರು ಗಾಯಗೊಂಡಿದ್ದಾರೆ.
ಕರಡಿಗುದ್ದಿ ಗ್ರಾಮದಲ್ಲಿ ಗುರುವಾರ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವವಿತ್ತು. ಗ್ರಾಮದ ಹೊರವಲಯದ ಕಾರ್ಖಾನೆಯೊಂದರ ಬಳಿ ಮದುವೆಯೂ ಇತ್ತು. ಹೀಗಾಗಿ, ಕರಡಿಗುದ್ದಿ ಹಾಗೂ ಮಾರಿಹಾಳ ಗ್ರಾಮದ ಕೆಲ ಯುವಕರು ರಾಜ್ಯ ಹೆದ್ದಾರಿ ಬಳಿ ನಿಂತಿದ್ದರು. ಬೆಳಗಾವಿಯಿಂದ ಬರುತ್ತಿದ್ದ ಜೀಪ್ನಲ್ಲಿ ಸುಣಕುಂಪಿ, ಸುತಗಟ್ಟಿ, ಮಲ್ಲಾಪುರ ಗ್ರಾಮದ ಜನರಿದ್ದರು. ಅವರು ಕಾರ್ಖಾನೆ ಬಳಿ ಪರಿಚಯದ ಯುವಕನನ್ನು ನೋಡಿ ಜೀಪ್ ನಿಲ್ಲಿಸಿದ್ದಾರೆ. ಆಗ ಕೆಲ ಯುವಕರು ಜೀಪ್ನಲ್ಲಿ ಇದ್ದವರ ಮೇಲೆ ಅವಾಚ್ಯ ಶಬ್ದ ಪ್ರಯೋಗಿಸಿದ್ದಾರೆ. ಆಗ ಮಾತಗೆ ಮಾತು ಬೆಳೆದು ಎರಡೂ ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಮಾರಕಾಸ್ತ್ರದಿಂದ ನಡೆದ ಹಲ್ಲೆಯಿಂದ ಮುದಕಪ್ಪ ಸಾವಿಗೀಡಾಗಿದ್ದಾರೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.
ಎರಡೂ ಗುಂಪುಗಳವರು ಗಾಯಗೊಂಡಿದ್ದು, ಅವರನ್ಬು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಗ್ರಾಮೀಣ ಎಸಿಪಿ ಜಿ. ಗುಡಾಜಿ, ಮಾರಿಹಾಳ ಪಿಐ ಬಸ್ಸಾಪುರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.