ಬೆಳಗಾವಿ:ನಗರದಲ್ಲಿ 2011ರಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ತೆರವುಗೊಳಿಸಿದ ಗೂಡಂಗಡಿಗಳವರಿಗಾಗಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆಗಳನ್ನ ಹಂಚಿಕೆ ಮಾಡುವಂತೆ ಆಗ್ರಹಿಸಿ, ಗೂಡಂಗಡಿಗಳ ವ್ಯಾಪಾರಿಗಳು, ಈವರೆಗೆ ಸರ್ಕಾರಕ್ಕೆ ಸಲ್ಲಿಸಿದ ಮನವಿಗಳ ಕಡತಗಳನ್ನು ಹೊತ್ತುಕೊಂಡು ಮಂಗಳವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.
‘ಸಮ್ಮೇಳನಕ್ಕಾಗಿ ನಗರವನ್ನು ಅಂದಗೊಳಿಸುವುದಕ್ಕಾಗಿ, ನಮ್ಮ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಲಾಯಿತು. ಹೊಸದಾಗಿ ಮಳಿಗೆಗಳನ್ನು ಕಟ್ಟಿನಿಮಗೆ ನೀಡಲಾಗುವುದು ಎಂಬ ಭರವಸೆಯನ್ನು ಪಾಲಿಕೆ ಅಧಿಕಾರಿಗಳು ನೀಡಿದ್ದರು. ಅದರಂತೆ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ನಾವು ತೊಂದದರೆ ಅನುಭವಿಸುವಂತಾಗಿದೆ. ರಸ್ತೆ ಬದಿಯಲ್ಲಿ ಬಿಸಿಲು, ಮಳೆ, ಗಾಳಿ, ಚಳಿ ಎನ್ನದೇ ವ್ಯಾಪಾರ ಮಾಡುವಂತಾಗಿದೆ’ಎಂದು ತಿಳಿಸಿದರು.
48 ಮಳಿಗೆಗಳನ್ನು ಕಟ್ಟಲಾಗಿದ್ದು, ಸಮ್ಮೇಳನದ ವೇಳೆ ಸ್ಥಳಾಂತರಿಸಲಾದ 38 ಮಂದಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ವ್ಯಾಪಾರಿಗಳಾದ ಸಲೀಂ ಮುಲ್ಲಾ, ಚಿದಾನಂದ ತಳವಾರ, ಶ್ರೀನಾಥ ಪವಾರ, ಶೇಖರ ಶೆಟ್ಟಿ, ಬಡೇಸಾಬ ಯರಗಟ್ಟಿ, ಅಣ್ಣಯ್ಯ ಪೂಜೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.