ADVERTISEMENT

ಪ್ರಚಾರ ಸಭೆಯಲ್ಲಿ ಸಂತ್ರಸ್ತರ ಕಣ್ಣೀರು!

ಸಂತೈಸಿದ ಎಂ.ಬಿ. ಪಾಟೀಲ, ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 14:39 IST
Last Updated 25 ನವೆಂಬರ್ 2019, 14:39 IST
ಅಥಣಿ ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಶಾಸಕಿ ಎಂ.ಬಿ. ‍ಪಾಟೀಲ ಮಾತನಾಡಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಇದ್ದಾರೆ
ಅಥಣಿ ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಶಾಸಕಿ ಎಂ.ಬಿ. ‍ಪಾಟೀಲ ಮಾತನಾಡಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಇದ್ದಾರೆ   

ಅಥಣಿ: ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ, ಕಾಂಗ್ರೆಸ್‌ ಆಭ್ಯರ್ಥಿ ಗಜಾನನ ಪರ ಪ್ರಚಾರ ಸಭೆಯಲ್ಲಿ ಕಣ್ಣೀರಿಟ್ಟ ನೆರೆ ಸಂತ್ರಸ್ತ ಮಹಿಳೆಯರನ್ನು ಶಾಸಕರಾದ ಎಂ.ಬಿ. ಪಾಟೀಲ ಹಾಗೂ ಲಕ್ಷ್ಮಿ ಹೆಬ್ಬಾಳಕರ ಸಂತೈಸಿದರು.

‘ಈ ಜನರ ಶಾಪ ಅನರ್ಹ ಶಾಸಕರಿಗೆ ತಟ್ಟಬೇಕಲ್ಲವೇ?’ ಎಂದು ನೆರೆದಿದ್ದವರನ್ನು ಕೇಳಿದರು.

‘ಕಾಂಗ್ರೆಸ್‌ನಿಂದ ಗೆದ್ದಿದ್ದ ಮಹೇಶ ಕುಮಠಳ್ಳಿ ಏನೇನೋ ನೆಪ ಹೇಳಿಕೊಂಡು ಇಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ. ನೆರೆ ಬಂದಾಗ ಇಲ್ಲಿರಲಿಲ್ಲ. ಹೀಗಾಗಿ, ಜನರಲ್ಲಿ ಅಸಮಾಧಾನವಿದೆ. ಸಂತ್ರಸ್ತರಿಗೆ ಸೂಕ್ತ ‍ಪರಿಹಾರ ಕೊಡಿಸುವ ನಿಟ್ಟಿನಲ್ಲೂ ಕುಮಠಳ್ಳಿ ಶ್ರಮಿಸಲಿಲ್ಲ. ಇಂತಹ ಹಲವು ತಾಯಂದಿರ ಶಾಪ ಅವರಿಗೆ ತಟ್ಟದೇ ಬಿಡುವುದಿಲ್ಲ’ ಎಂದರು.

ADVERTISEMENT

‘ತಮ್ಮ ಸ್ವಾರ್ಥ, ಆಸೆಗಾಗಿ ಜನರನ್ನು ಬಲಿ ಕೊಟ್ಟಿದ್ದಾರೆ. ‘ಕುಮಠಳ್ಳಿ ಕಡೆಯವರು ಹಣ ಕೊಟ್ಟರೆ ತೆಗೆದುಕೊಳ್ಳಿ. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ಗಜಾನನ ಮಂಗಸೂಳಿಗೆ ಮತ ಹಾಕಿ’ ಎಂದು ಹೇಳಿದರು.

ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಪ್ರವಾಹ ಸಂದರ್ಭದಲ್ಲಿ ಕುಮಠಳ್ಳಿ ಮುಂಬೈನಲ್ಲಿದ್ದರು. ಅವರ ಪರವಾಗಿ ಕುಟುಂಬದವರಾದರೂ ಸಂತ್ರಸ್ತರ ಕಣ್ಣೀರು ಒರೆಸಲು ಬರಬಹುದಿತ್ತು. ಮಹೇಶ ಮುಂಬೈಯಲ್ಲಿ ದುಡ್ಡು ಗಳಿಸಿದರೆ, ಅವರ ಸಹೋದರರು ತಮ್ಮ ವ್ಯವಹಾರಗಳಲ್ಲಿ ತೊಡಗಿ ದುಡ್ಡು ಮಾಡಿದರು. ಈಗ, ಅವರ ಇಡೀ ಕುಟುಂಬ ಮತ ಕೇಳಲು ಬರುತ್ತಿದೆ. ಅವರಿಗೆ ಮತದಾರರು ಬುದ್ಧಿ ಕಲಿಸಬೇಕು’ ಎಂದು ಕೋರಿದರು.

ಮಹಿಳೆಯೊಬ್ಬರು ಪ್ರವಾಹದಲ್ಲಿ ಮಗ ಕೊಚ್ಚಿ ಹೋದ ಬಗ್ಗೆ ದುಃಖ ತೋಡಿಕೊಂಡರು. ಅವರ ಬಳಿಗೆ ಹೋದ ಲಕ್ಷ್ಮಿ ಸಮಾಧಾನಪಡಿಸಿದರು.ಅಭ್ಯರ್ಥಿ ಗಜಾನನ ಮಂಗಸೂಳಿ, ಜಿಲ್ಲಾ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ ಅನಿಲ ಸುಣದೋಳಿ, ರಮೇಶಗೌಡ ಪಾಟೀಲ, ದರೆಪ್ಪ ಠಕ್ಕಣ್ಣವರ, ಶ್ರೀಕಾಂತ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.