ADVERTISEMENT

ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಶಕ್ತಿ ನೀಡುವ ಚುನಾವಣೆ ಇದು: ಸತೀಶ ಜಾರಕಿಹೊಳಿ

ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 13:42 IST
Last Updated 30 ಮಾರ್ಚ್ 2021, 13:42 IST
   

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತಗಳೇ ಹೆಚ್ಚಿವೆ. ಅದನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕಿದೆ’ ಎಂದು ಕಾಂಗ್ರೆಸ್ ಆಭ್ಯರ್ಥಿ ಸತೀಶ ಜಾರಕಿಹೊಳಿ ಕಾರ್ಯಕರ್ತರಿಗೆ ಕರೆ ನೀಡಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜನರಿಗೆ ತಿಳಿ ಹೇಳಿ ಮತದಾನಕ್ಕೆ ಕರೆತರಬೇಕು. ಮನೆಮನೆಗೆ ತೆರಳಿ ಪ್ರಚಾರ ನಡೆಸಬೇಕು’ ಎಂದು ಹೇಳಿದರು.

ADVERTISEMENT

‘ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಶಕ್ತಿ ನೀಡುವ ಚುನಾವಣೆ ಇದಾಗಿದೆ. ನಾವು ಇಲ್ಲಿ ಗೆಲ್ಲುವ ಮೂಲಕ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ ಎನ್ನುವುದನ್ನು ತೋರಿಸಬೇಕು. ಎರಡು ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಅವರ ಸುಳ್ಳು ಭರವಸೆಗಳನ್ನು ನಂಬಿ ಜನರು ಬಿಜೆಪಿಯತ್ತ ವಾಲಿದ್ದರು. ಆದರೆ, ಈಗ ಆ ಭರವಸೆಗಳು ಹುಸಿಯಾಗಿವೆ. ಇದನ್ನು ನಾವು ಮತದಾರರಿಗೆ ತಿಳಿಹೇಳಬೇಕು. ನಾವು ಆಯ್ಕೆಯಾದರೆ ಏನು ಮಾಡಲಿದ್ದೇವೆ ಎನ್ನುವುದನ್ನೂ ಜನರಿಗೆ ತಿಳಿಸಬೇಕು’ ಎಂದು ತಿಳಿಸಿದರು.

ದೇಶಪಾಂಡೆಗೆ ಉತ್ತರ, ದಕ್ಷಿಣ ಸಾರಥ್ಯ

‘ನಾಯಕ ಆರ್.ವಿ. ದೇಶಪಾಂಡೆಗೆ ಬೆಳಗಾವಿ ಉತ್ತರ ಹಾಗೂ ದಕ್ಷಿಣ ವಿಧಾಸಭಾ ಕ್ಷೇತ್ರಗಳ ನೇತೃತ್ವವನ್ನು ಪಕ್ಷ ವಹಿಸಿದೆ. ಅವರ ನೇತೃತ್ವದಲ್ಲಿ ಕಾರ್ಯಕರ್ತರು ಸಂಘಟನೆ ಹಾಗೂ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

‘ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಶಾಸಕರು ಇಲ್ಲ. ಆದರೆ, ಅಲ್ಲಿ ನಮ್ಮ ಪಕ್ಷದ ಕಾಯಂ ಮತದಾರರಿದ್ದಾರೆ. ಇನ್ನೂ ಎರಡು ಪಟ್ಟು ಹೆಚ್ಚು ಮತಗಳನ್ನು ಸೆಳೆಯುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು’ ಎಂದು ತಿಳಿಸಿದರು.

ಶಾಸಕ ಆರ್.ವಿ. ದೇಶಪಾಂಡೆ, ಮುಖಂಡರಾದ ಫಿರೋಜ್ ಶೇಠ್, ಎಸ್.ಬಿ. ಘಾಟಗೆ, ವೀರಕುಮಾರ ಪಾಟೀಲ, ಎ.ಬಿ. ಪಾಟೀಲ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಅನಿಲ ಪೋತದಾರ, ಜಯಶ್ರೀ ಮಾಳಗಿ, ಲತಾ ಮಾನೆ, ಆನಂದ ಗಡ್ಡದವರಮಠ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.