ಬೆಳಗಾವಿ: ‘ಪ್ರಧಾನಿ ಮೋದಿ ಅಧಿಕಾರಕ್ಕಾಗಿ ದೇಶದ 130 ಕೋಟಿ ಜನರನ್ನು ಹುಚ್ಚರನ್ನಾಗಿಸುತ್ತಿದ್ದಾರೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಟೀಕಿಸಿದರು.
ತಾಲ್ಲೂಕಿನ ಕಡೋಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಬಿಜೆಪಿಯವರು ಹಿಂದುತ್ವ ಹಾಗೂ ಕಾಶ್ಮೀರ ವಿಷಯದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಸೇನೆ ಮತ್ತು ಸರ್ಕಾರ ನಿಭಾಯಿಸುತ್ತದೆ. ಅದು ಬಿಜೆಪಿ ಮತ್ತು ಆರ್ಎಸ್ಎಸ್ ಕೆಲಸವಲ್ಲ. ದೇಶದ ಗಂಭೀರ ಸಮಸ್ಯೆಗಳನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಂಡು ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ದೇಶ ಸೇವೆಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೆಚ್ಚು ಪ್ರಾಣ ತ್ಯಾಗ ಮಾಡಿದ್ದಾರೆಯೇ ಹೊರತು ದೇಶಪಾಂಡೆ, ಕುಲಕರ್ಣಿ, ಜೋಶಿ ಸೇರಿದಂತೆ ಮೇಲ್ವರ್ಗದವರು ಜೀವ ಬಿಟ್ಟ ಇತಿಹಾಸವಿಲ್ಲ. ಮನಮೋಹನ ಸಿಂಗ್ ನೇತೃತ್ವದ ಯುಪಿಎ ಆಡಳಿತ ಅವಧಿಗಿಂತ ಮೋದಿ ಆಡಳಿತದಲ್ಲಿಯೇ ಹೆಚ್ಚು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿವೆ. ಅದರ ಶ್ರೇಯಸ್ಸನ್ನು ಸೇನೆಗೆ ನೀಡಿದ್ದೇವೆ. ಮೋದಿ ರಾಜಕೀಯ ಲಾಭಕ್ಕೆ ಬಳಿಸಿಕೊಂಡಿದ್ದು ದುರಂತವೇ ಸರಿ. ಮೋದಿ ಆಡಳಿತ ನಡೆಸಲು ಫೇಲ್ ಆಗಿದ್ದರೂ ಮಾಧ್ಯಮದವರು ಪಾಸ್ ಮಾಡಿ ಮಾರ್ಕ್ಸ್ ಕಾರ್ಡ್ ಹಂಚುತ್ತಿದ್ದಾರೆ’ ಎಂದು ದೂರಿದರು.
‘ಪಾಕಿಸ್ತಾನವನ್ನು ಟೀಕಿಸಿ ಭಾಷಣ ಮಾಡುವ ಪ್ರಧಾನಿಯೇ ಅಲ್ಲಿಗೆ ತೆರಳಿ ಮಾಜಿ ಪ್ರಧಾನಿ ನವಾಜ್ ಶರೀಫ್ ತಬ್ಬಿಕೊಂಡು ಬಿರಿಯಾನಿ ತಿಂದು ಬಂದಿದ್ದಾರೆ. ಅಂಥವರು ಹಿಂದುತ್ವದ ಬಗ್ಗೆ ಪಾಠ ಮಾಡುತ್ತಾರೆ’ ಎಂದು ಲೇವಡಿ ಮಾಡಿದರು.
‘ಬಿಜೆಪಿ ನಾಯಕರು, ಮುಖಂಡರು ಅಂತರ್ಜಾತಿ ಮದುವೆ ಮಾಡಿಕೊಂಡರೆ ಅವರ ತಕರಾರಿಲ್ಲ. ಸಾಮಾನ್ಯರು ಮಾಡಿಕೊಂಡರೆ ಮರ್ಯಾದೆ ಹತ್ಯೆಗೆ ಪ್ರೇರೇಪಿಸುತ್ತಾರೆ. ಇದ್ಯಾವ ನ್ಯಾಯ? ಒಂದೆಡೆ ಗೋಮಾಂಸಕ್ಕಾಗಿ ಜನರ ಹತ್ಯೆ ನಡೆಯುತ್ತಿದೆ. ಮತ್ತೊಂದೆಡೆ ಮೋದಿ ಆಡಳಿತದಲ್ಲಿಯೇ ಅತಿ ಹೆಚ್ಚು ಪ್ರಮಾಣದ ಗೋಮಾಂಸ ದೇಶಕ್ಕೆ ರಫ್ತಾಗಿದೆ. ಇದರಲ್ಲಿ ಹಿಂದೂಗಳ ಕಂಪನಿಗಳೇ ಹೆಚ್ಚು ಎನ್ನುವುದನ್ನು ಗಮನಿಸಬೇಕು’ ಎಂದು ಹೇಳಿದರು.
‘ಮತದಾರರು ಹಿಂದುತ್ವ ಮೊದಲಾದ ವಿಷಯದ ಹಿಂದೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವ ಬದಲು ವಿಕಾಸದ ಕಡೆ ಸಾಗಬೇಕು. ಅಪಪ್ರಚಾರ ಮಾಡುವವರಿಗೆ ಮರುಳಾಗಬೇಡಿ. ಹಣ, ಮದ್ಯದ ಆಮಿಷಕ್ಕೆ ಒಳಗಾಗಬೇಡಿ’ ಎಂದು ಕೊರಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಮುಖಂಡರಾದ ಆನಂದ ಪಾಟೀಲ, ರಾಜು ಮಾಯಣ್ಣ, ಸಂದೀಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.