ಬೆಳಗಾವಿ: ಏಪ್ರಿಲ್ 1ರಿಂದ ಮುಂದಿನ ಎರಡು ತಿಂಗಳ ಪಡಿತರವನ್ನು ಬಿಪಿಎಲ್, ಎಪಿಎಲ್ (ಮೊದಲೇ ಮನವಿ ಮಾಡಿದ್ದರೆ ಮಾತ್ರ)ಮೊದಲಾದ ಪಡಿತರ ಚೀಟಿ ಹೊಂದಿರುವವರ ಮನೆ ಮನೆಗಳಿಗೆ ತಲುಪಿಸಲು ನಿರ್ಧರಿಸಲಾಗಿದೆ.
ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಂಕಷ್ಟದ ಈ ಸಂದರ್ಭದಲ್ಲಿ ಇದನ್ನು ದೇಶಸೇವೆ ಎಂದು ಪರಿಗಣಿಸಲಾಗುವುದು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ ತಿಳಿಸಿದರು.
ಜಿಲ್ಲೆಯಲ್ಲಿ ಈ ತಿಂಗಳ ಪಡಿತರ ವಿತರಣೆ ಕಾರ್ಯ ಶೇ 95ರಷ್ಟು ಮುಗಿದಿದೆ. ಬಾಕಿ ಇರುವವರಿಗೆ ವಿತರಿಸಲು ಪೊಲೀಸರು ಸಹಕಾರ ನೀಡಬೇಕು. ಪಡಿತರ ಚೀಟಿ ಹೊಂದಿದ ಒಬ್ಬ ಸದಸ್ಯ ನ್ಯಾಯಬೆಲೆ ಅಂಗಡಿಗೆ ಬರಲು ಅವಕಾಶ ಕೊಡಬೇಕು. ಚೀಟಿ ತೋರಿಸಿದರೆ ಬರಲು ಅವಕಾಶ ನೀಡಬೇಕು ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ತಿಳಿಸಿದರು.
ಎಸಿಪಿಗಳಾದ ನಾರಾಯಣ ಭರಮನಿ, ಮಹಾಂತೇಶ್ವರ ಜಿದ್ದಿ, ಪಡಿತರ ವಿತರಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಭೈರಗೌಡ ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿರಾವ್ ಅಂಬೋಳಕರ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.