ಮೂಡಲಗಿ: ಪಟ್ಟಣದಲ್ಲಿ ಬುಧವಾರ ಕೊರೊನಾ ವೈರಸ್ ಮಾರಿಯು ಅಟ್ಟಹಾಸದಿಂದ ಕೇಕೇ ಹಾಕುತ್ತಾ ‘ತೆಪ್ಪಗೆ ಮನೆಯಲ್ಲಿ ಕುಳಿತಿಕೊಂಡಿರ್ರೀ ಇಲ್ಲಾಂದ್ರೆ ಹೊರಗೆ ಬಂದರೇ ಬರ್ರೀ... ನಿಮ್ಮನ್ನ ಬಿಡೋದಿಲ್ಲ’ ಎಂದು ವಿಭಿನ್ನವಾಗಿ ಹೆಜ್ಜೆ ಹಾಕುತ್ತಾ ಜನರಲ್ಲಿ ಒಂದು ರೀತಿಯಲ್ಲಿ ಭಯವನ್ನು ಹುಟ್ಟಿಸಿತು. ಇದು ಇಲ್ಲಿಯ ಯುವಕ ಸುರೇಶ ಬೆಳವಿ ಮಾಡಿದ ಅರಿವು ಮೂಡಿಸುವ ಪ್ರಯತ್ನ. ಕೊರೊನಾ ವೈರಾಣುವಿನ ಭಯಾನಕ ಸ್ವರೂಪವನ್ನು ಜನರಿಗೆ ತೋರಿಸುವ ಸಲುವಾಗಿ ಕಾಲ್ಪನಿಕ ವೇಷ ಹಾಕಿಕೊಂಡು ಬೀದಿ ಬೀದಿಗಳಲ್ಲಿ ಗಮನಸೆಳೆದರು.
ಕಪ್ಪು ಬಟ್ಟೆಯ ದಿರಿಸು ಹಾಕಿದ್ದರು. ರಾಕ್ಷಸ ರೀತಿಯಲ್ಲಿ ಮುಖಕ್ಕೆ ಬಣ್ಣ ಹಾಕಿಕೊಂಡು ಎದೆ, ಹೊಟ್ಟೆ ಮತ್ತು ಬೆನ್ನು ಮೇಲೆ ‘ಹೊರಗೆ ಬಂದರೆ ನಿಮ್ಮನ್ನು ಬಿಡೊಲ್ಲ’, ‘ಕಾನೂನು ಪಾಲನೆ ಎಲ್ಲರ ಹೊಣೆ’ ಎಂಬಿತ್ಯಾದಿ ಬರಹಗಳಿಂದ ಜನರಲ್ಲಿ ಕೊರೊನಾ ಕುರಿತು ಸ್ವಯಂ ಪ್ರೇರಣೆಯಿಂದ ಜಾಗೃತಿ ಮೂಡಿಸಿದರು. ಲಾಕ್ಡೌನ್ ಮುಗಿಯುವವರೆಗೂ ಹೊರಗಡೆಗೆ ಬರಬೇಡಿ ಎಂಬ ಸಂದೇಶವನ್ನು ಜನರಿಗೆ ರವಾನಿಸಿದರು.
ಅವರು ಒಂದೂವರೆ ದಶಕದಿಂದ ರಾಷ್ಟ್ರೀಯ ದಿನಾಚರಣೆಗಳು, ದೇಶಕ್ಕೆ ಅಪಾಯ ಬಂದಾಗೆಲ್ಲ ವಿವಿಧ ವೇಷಗಳಲ್ಲಿ ಜನರಲ್ಲಿ ಅರಿವು ಮೂಡಿಸುವುದನ್ನು ರೂಢಿಸಿಕೊಂಡು ಬಂದಿರುವುದು ವಿಶೇಷ. ಸ್ವಂತ ಖರ್ಚಿನಲ್ಲಿ, ಸ್ವಯಪ್ರೇರಣೆಯಿಂದ ಈ ಕಾರ್ಯ ಮಾಡುತ್ತಾ ಬಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.