ADVERTISEMENT

ಕೊರೊನಾ ವೈರಸ್ ಭೀತಿ: ಸೋಂಕುನಿವಾರಕ ಸಿಂಪಡಣೆಗೆ ಚಾಲನೆ

ಬೆಳಗಾವಿ ನಗರಪಾಲಿಕೆಯಿಂದ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 12:40 IST
Last Updated 20 ಮಾರ್ಚ್ 2020, 12:40 IST
ಬೆಳಗಾವಿಯ ಸದಾಶಿವನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಗರಪಾಲಿಕೆ ಸಿಬ್ಬಂದಿ ಸೋಂಕುನಿವಾರಕ ಸಿಂಪಡಿಸಿದರು. ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಇದ್ದಾರೆಪ್ರಜಾವಾಣಿ ಚಿತ್ರ
ಬೆಳಗಾವಿಯ ಸದಾಶಿವನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಗರಪಾಲಿಕೆ ಸಿಬ್ಬಂದಿ ಸೋಂಕುನಿವಾರಕ ಸಿಂಪಡಿಸಿದರು. ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಇದ್ದಾರೆಪ್ರಜಾವಾಣಿ ಚಿತ್ರ   

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡದಂತೆ ನೋಡಿಕೊಳ್ಳಲು ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ನಗರಪಾಲಿಕೆಯು ಇಲ್ಲಿ ಸೋಂಕುನಿವಾರಕ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ನಗರದ ಎಲ್ಲ 58 ವಾರ್ಡ್‌ಗಳಲ್ಲೂ ಈ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಮುಖ್ಯ ರಸ್ತೆಗಳು, ಒಳ ರಸ್ತೆಗಳು, ಚರಂಡಿಗಳು, ಪ್ರಯಾಣಿಕರ ತಂಗುದಾಣ, ಬಸ್‌ ನಿಲ್ದಾಣ, ವೃತ್ತಗಳು ಸೇರಿದಂತೆ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲೂ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುವುದು. ಇದಕ್ಕಾಗಿ ತಲಾ 5ಸಾವಿರ ಲೀಟರ್ ಸಾಮರ್ಥ್ಯದ ಒಂದು ಜೆಟ್ಟಿಂಗ್‌ ಮಷಿನ್‌ ಹಾಗೂ ಎರಡು ನೀರಿನ ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದೆ. ಅವುಗಳಿಗೆ ವಾಲ್ವ್‌ ಅಳವಡಿಸಿ, ಕ್ಲೋರಿನ್‌ ಸಲ್ಯೂಷನ್‌ ಅನ್ನು ನೀರಿನಲ್ಲಿ ಬೆರೆಸಿ ಸ್ಪ್ರೇ ಮಾಡಲಾಗುತ್ತಿದೆ. ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ನೇತೃತ್ವದಲ್ಲಿ ಶುಕ್ರವಾರ ಕೆಲವು ಕಡೆಗಳಲ್ಲಿ ಸಿಂಪಡಣೆ ಮಾಡಲಾಯಿತು. ಶನಿವಾರದಿಂದ ನಿತ್ಯ 2–3 ವಾರ್ಡ್‌ಗಳಲ್ಲಿ ಈ ಕಾರ್ಯ ನಡೆಸಲು ಯೋಜಿಸಲಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

‘5 ಸಾವಿರ ಲೀಟರ್‌ ನೀರಿಗೆ 25ರಿಂದ 30 ಕೆ.ಜಿ.ಯಷ್ಟು ಕ್ಲೋರಿನ್ ಸಲ್ಯೂಷನ್‌ ಪೌಡರ್ ಬಳಸಲಾಗುವುದು. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲವನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಪಾಳಿಯಲ್ಲಿ ಚಾಲಕರು ಹಾಗೂ ಆರು ಮಂದಿ ಪೌರಕಾರ್ಮಿಕರು ಈ ತಂಡದಲ್ಲಿರುತ್ತಾರೆ. ಪೌರಕಾರ್ಮಿಕರು ಸ್ವಚ್ಛತೆ ಮಾಡಿದ ನಂತರ ಸೋಂಕುನಿವಾರಕ ಸಿಂಪಡಿಸಲಾಗುವುದು. ಕೊರೊನಾ ವೈರಾಣು ಸೋಂಕು ಹರಡದಂತೆ ನೋಡಿಕೊಳ್ಳಲು ಮುಂಜಾಗ್ರತೆಯಾಗಿ ಈ ಕ್ರಮ ವಹಿಸಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.