ಬೆಳಗಾವಿ: ‘ಕೋವಿಡ್-19ನಿಂದ ಮರಣ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮತ್ತು ಇತರ ಹಿಂದುಳಿದ ವರ್ಗಗಳ ವ್ಯಕ್ತಿಯ ಕುಟುಂಬದವರಿಗೆ ಆರ್ಥಿಕ ಸಹಾಯ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
‘ಕೋವಿಡ್ 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಮರಣ ಹೊಂದಿರುವ ಪ.ಜಾತಿ, ಪ.ಪಂಗಡ ಮತ್ತು ಇತರ ಹಿಂದುಳಿದ ವರ್ಗದವರಿಗೆ ಎನ್.ಎಫ್.ಎಸ್.ಡಿ.ಸಿ ಮತ್ತು ಎನ್ಬಿಸಿಎಫ್ಡಿಸಿಯಿಂದ ₹ 5 ಲಕ್ಷ ನೀಡಲಾಗುವುದು. ₹ 5 ಲಕ್ಷದಲ್ಲಿ ₹ 4 ಲಕ್ಷ ಅವಧಿ ಸಾಲವನ್ನು ಶೇ 6 ಬಡ್ಡಿ ದರದಲ್ಲಿ ಮತ್ತು ₹ 1 ಲಕ್ಷವನ್ನು ಸಹಾಯಧನದ ರೂಪದಲ್ಲಿ ನೀಡಲು ಉದ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಈ ವರ್ಗದವರು ಜಾತಿ ಪ್ರಮಾಣಪತ್ರ, ಕುಟುಂಬದ ಆದಾಯ ಪ್ರಮಾಣಪತ್ರ, ವ್ಯಕ್ತಿಯ ಮರಣ ಪ್ರಮಾಣಪತ್ರ, ಕುಟುಂಬದ ಪಡಿತರ ಚೀಟಿ, ಮೃತ ವ್ಯಕ್ತಿಯ ಆಧಾರ್ ಕಾರ್ಡ್, ವಾರಸುದಾರರ ಆಧಾರರ್ ಕಾರ್ಡ್, ಆರ್.ಟಿ.ಪಿ.ಸಿ.ಆರ್. ವರದಿ ಹಾಗೂ ಕೋವಿಡ್-19ನಿಂದ ಮೃತರಾದ ಬಗ್ಗೆ ವೈದ್ಯಕೀಯ ಪ್ರಮಾಣಪತ್ರವನ್ನು ಜೂನ್ 24ರ ಒಳಗೆ ಸಲ್ಲಿಸಬೇಕು’ ಎಂದು ತಿಳಿಸಿದ್ದಾರೆ.
ಅರ್ಜಿ ಹಾಗೂ ದಾಖಲೆಗಳನ್ನು ಪರಿಶಿಷ್ಟ ಜಾತಿಯವರು, ಸುವರ್ಣ ವಿಧಾನಸೌಧದ ಕೊಠಡಿ ಸಂಖ್ಯೆ 123ರಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಜಿಲ್ಲಾ ವ್ಯವಸ್ಥಾಪಕರ ಕಚೇರಿ ಮತ್ತು ಪರಿಶಿಷ್ಟ ಪಂಗಡದವರುಸುವರ್ಣ ವಿಧಾನಸೌಧದ ಕೊಠಡಿ ಸಂಖ್ಯೆ 222ರಲ್ಲಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು. ಅಂತೆಯೇ ಹಿಂದುಳಿದ ವರ್ಗದವರು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು. ಮನೆಯ ಯಜಮಾನನಾಗಿದ್ದ ವ್ಯಕ್ತಿ ಮೃತರಾಗಿದ್ದಲ್ಲಿ ಪರಿಹಾರ ದೊರೆಯಲಿದೆ. ವ್ಯಕ್ತಿಯ ವಯಸ್ಸು 18ರಿಂದ 60ರ ಒಳಗೆ ಇರಬೇಕು ಮತ್ತು ವಾರ್ಷಿಕ ಆದಾಯ ₹ 3 ಲಕ್ಷದೊಳಗೆ ಇರಬೇಕು’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.