ನೇಸರಗಿ: ‘ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ವೈದ್ಯರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿ ಮಾಡುತ್ತಿರುವ ಉತ್ತಮ ಕಾರ್ಯದಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸಮೀಪದ ದೇಶನೂರ ಗ್ರಾಮದಲ್ಲಿ ನವೀಕೃತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಕೊರೊನಾ ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ಅಮೋಘ ಸೇವೆ ಮಾಡಿದ್ದಾರೆ. ಆರಂಭದಲ್ಲಿ ಆಮ್ಲಜನಕ ಹಾಗೂ ವೆಂಟಿಲೇಟರ್ ಲಭ್ಯವಾಗದೆ ಅನೇಕ ಜನ ಪ್ರಾಣ ಕಳೆದುಕೊಂಡರು. ನಂತರದ ದಿನಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಲಭಿಸಿತು. ಪ್ರಧಾನಿಯು ಕೋವಿಡ್ ಲಸಿಕೆಯೂ ಸಿಗುವಂತೆ ಮಾಡಿ ಜನರ ಪ್ರಾಣ ರಕ್ಷಣೆ ಮಾಡಿದರು’ ಎಂದರು.
‘ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗ್ಗಡೆ ಅವರ ಕಾಲದಲ್ಲಿ ಉದ್ಘಾಟನೆಗೊಂಡಿದ್ದ ಇಲ್ಲಿನ ಪ್ರಾಥಮಿಕ ಕೇಂದ್ರವನ್ನು ₹ 2.31 ಕೋಟಿ ವೆಚ್ಚದಲ್ಲಿ ವಿನೂತನವಾಗಿ ನಿರ್ಮಿಸಲಾಗಿದೆ. ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಇದೇ ವೇಳೆ, ದೇಶನೂರ-ಬೆಳಗಾವಿ ಹೆದ್ದಾರಿ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ (₹ 1.72 ಕೋಟಿ ಮೊತ್ತ) ಚಾಲನೆ ನೀಡಲಾಯಿತು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಫ್. ಕೊಳದೂರ, ಮುಖಂಡರಾದ ಶ್ರೀಶೈಲ ಕಮತಗಿ, ಬಸನಗೌಡ ಸಿದ್ರಾಮನಿ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಬಸವರಾಜ ನಾಗರಾಳ, ತಾ.ಪಂ. ಇಒ ಸುಭಾಸ ಸಂಪಗಾವಿ, ಜಿಲ್ಲಾ ಲಸಿಕಾಧಿಕಾರಿ ಡಾ.ಈಶ್ವರ ಗಡಾದ, ಡಾ.ಎಸ್.ಎಸ್. ಸಿದ್ದನ್ನವರ, ಗ್ರಾ.ಪಂ. ಅಧ್ಯಕ್ಷೆ ಶಂಕ್ರಮ್ಮಾ ಚಡಿಚಾಳ, ಉಪಾಧ್ಯಕ್ಷೆ ಶೋಭಾ ಭಜಂತ್ರಿ, ಮಲ್ಲಿಕಾರ್ಜುನ ತುಬಾಕಿ, ಡಾ.ಎಂ.ವಿ. ಕಿವಡಸನ್ನವರ, ಉಳವಪ್ಪ ಉಳ್ಳೆಗಡ್ಡಿ, ಡಾ.ಶಕುಂತಲಾ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.