ADVERTISEMENT

ಲಸಿಕೆ ಜವಾಬ್ದಾರಿ ಶಾಸಕರು ವಹಿಸಿಕೊಳ್ಳಲಿ: ನಿವೃತ್ತ ನ್ಯಾಯಾಧೀಶ ಜಿನದತ್ತ ದೇಸಾಯಿ

​ಪ್ರಜಾವಾಣಿ ವಾರ್ತೆ
Published 7 ಮೇ 2021, 12:29 IST
Last Updated 7 ಮೇ 2021, 12:29 IST
ಜಿನದತ್ತ ದೇಸಾಯಿ
ಜಿನದತ್ತ ದೇಸಾಯಿ   

ಬೆಳಗಾವಿ: ‘ಆಯಾ ಕ್ಷೇತ್ರಗಳ ಎಲ್ಲ ಮತದಾರರಿಗೆ ಕೋವಿಡ್ ರೋಗ ನಿರೋಧಕ ಲಸಿಕೆ ಕೊಡಿಸುವ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಳ್ಳಬೇಕು’ ಎಂದು ಕವಿ, ನಿವೃತ್ತ ನ್ಯಾಯಾಧೀಶ ಜಿನದತ್ತ ದೇಸಾಯಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಲಸಿಕಾ ಅಭಿಯಾನವನ್ನು 15 ದಿನಗಳಲ್ಲಿ ಪೂರೈಸಿದರೆ ಕೋವಿಡ್ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ’ ಎಂದು ಹೇಳಿದ್ದಾರೆ.

‘ಇಂಗ್ಲೆಂಡ್‌ನಲ್ಲಿ ಕೊರೊನಾ ನಿಯಂತ್ರಿಸಲು ಎಲ್ಲರಿಗೂ ಲಸಿಕೆ ಕೊಡಿಸಲಾಯಿತು. ಕೊರೊನಾ ನಿರ್ಮೂಲನೆಗೆ ಇರುವ ಸರಳ ಮಾರ್ಗ ಇದೊಂದೆ. ಕೊರೊನಾ ಬಂದ ನಂತರ ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ, ಸರಿಯಾದ ಚಿಕಿತ್ಸೆ ದೊರೆಯಲಿಲ್ಲ ಮತ್ತು ಆಮ್ಲಜನಕ ಲಭ್ಯವಿಲ್ಲ ಎನ್ನುವ ಹಲವು ಸಮಸ್ಯೆಗಳನ್ನು ಎದುರಿಸುವ ಬದಲು ಬಾರದಂತೆ ತಡೆಗಟ್ಟುವತ್ತ ಸರ್ಕಾರ ಗಮನಹರಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ADVERTISEMENT

‘ಹಳ್ಳಿಗಳ ಪ್ರತಿಯೊಬ್ಬರ ಮನೆಗೂ ತೆರಳಿ ಲಸಿಕೆ ಕೊಡುವಂತಾಗಬೇಕು. ಈ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಂಡಾಗ ಮಾತ್ರ ಈ ಕಾರ್ಯ ಯಶಸ್ವಿಯಾಗಲು ಸಾಧ್ಯ. ಹೆಚ್ಚಿನ ಶಾಸಕರು ಈ ನಿಟ್ಟಿನಲ್ಲಿ ನೆರವಿಗೆ ಮುಂದಾಗಿಲ್ಲ. ತಮ್ಮ ಸಮಸ್ಯೆಯೇ ಅಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತ‍ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.