ADVERTISEMENT

ರಾಮದುರ್ಗ: ಅನೈತಿಕ ಸಂಬಂಧ, ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 10:07 IST
Last Updated 20 ಸೆಪ್ಟೆಂಬರ್ 2022, 10:07 IST
ಲಕ್ಷ್ಮಿ ಜಟಗನ್ನವರ ಹಾಗೂ ರಮೇಶ ಬಡಿಗೇರ (ಬಂಧಿತ ಆರೋಪಿಗಳು)
ಲಕ್ಷ್ಮಿ ಜಟಗನ್ನವರ ಹಾಗೂ ರಮೇಶ ಬಡಿಗೇರ (ಬಂಧಿತ ಆರೋಪಿಗಳು)   

ರಾಮದುರ್ಗ (ಬೆಳಗಾವಿ): ತಾಲ್ಲೂಕಿನ ಹೊಸೂರ ಗ್ರಾಮದ ಬಳಿ ಸೋಮವಾರ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಕೊಲೆಯಾದವರ ಪತ್ನಿ ಹಾಗೂ ಆಕೆಯ ಪ್ರಿಯಕರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹೊಸೂರ ನಿವಾಸಿ ಪಾಂಡಪ್ಪ ದುಂಡಪ್ಪ ಜಟಕನ್ನವರ (35) ಕೊಲೆಯಾದವರು. ಇವರ ಪತ್ನಿ ಲಕ್ಷ್ಮಿ ಜಟಕನ್ನವವರ (30) ಹಾಗೂ ಪ್ರಿಯಕರ ಎನ್ನಲಾದ ರಮೇಶ ಬಡಿಗೇರ (36) ಬಂಧಿತರು.

ಅನೈತಿಕ ಸಂಬಂಧ ಕಾರಣ: ‘ಪಾಂಡಪ್ಪ ಹಾಗೂ ಲಕ್ಷ್ಮಿ ಕೆಲ ವರ್ಷಗಳಿಂದ ಹೊಸೂರ ಹೊರವಲಯದ ತಮ್ಮ ಜಮೀನಿನಲ್ಲಿ ಶೆಡ್‌ ಹಾಕಿಕೊಂಡು ವಾಸವಾಗಿದ್ದರು. ಇತ್ತೀಚಿನ ಕೆಲ ತಿಂಗಳಿಂದ ಲಕ್ಷ್ಮಿ ಹಾಗೂ ರಮೇಶ ನಡುವೆ ಅನೈತಿಕ ಸಂಬಂಧ ಉಂಟಾಗಿತ್ತು. ಇದಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಲಕ್ಷ್ಮಿ ಕೊಲೆ ಮಾಡಿಸಿದ್ದಾಳೆ’ ಎಂದು ಮೃತನ ತಂದೆ ದುಂಡಪ್ಪ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಲಕ್ಷ್ಮಿ ಹಾಗೂ ರಮೇಶನ ನಡುವಿನ ಸಂಬಂಧ ಪಾಂಡಪ್ಪ ಅವರಿಗೆ ಗೊತ್ತಾಗಿತ್ತು. ಇದರಿಂದ ಬೇಸತ್ತು ಪಾಂಡಪ್ಪ ಹೊಲದಲ್ಲಿ ಮನೆ ಮಾಡಿ ಪತ್ನಿ ಜತೆಗೆ ಅಲ್ಲಿಯೇ ವಾಸವಾಗಿದ್ದರು. ಆದರೂ ಇಬ್ಬರ ನಡುವಿನ ಸಂಬಂಧ ಮುಂದುವರಿದೇ ಇತ್ತು. ಇದಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಇಬ್ಬರೂ ಪಾಂಡಪ್ಪ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಭಾನುವಾರ ರಾತ್ರಿ 10ರ ಸುಮಾರಿಗೆ ಪಾಂಡಪ್ಪ ನಿದ್ರೆಗೆ ಜಾರಿದ ಮೇಲೆ, ಲಕ್ಷ್ಮಿಯು ರಮೇಶನನ್ನು ಕರೆಸಿಕೊಂಡಿದ್ದಳು. ಇಬ್ಬರೂ ಸೇರಿ ಕಲ್ಲು, ದೊಣ್ಣೆ, ಕುಡಗೋಲಿನಿಂದ ಹೊಡೆದು ಪಾಂಡಪ್ಪ ಅವರನ್ನು ಕೊಲೆ ಮಾಡಿದರು. ಅದನ್ನು ಅಪಘಾತ ಎಂದು ಬಿಂಬಿಸುವ ಸಲುವಾಗಿ ತಡರಾತ್ರಿ ಪಾಂಡಪ್ಪ ಅವರ ಬೈಕಿನಲ್ಲೇ ಶವವನ್ನು ತೆಗೆದುಕೊಂಡು ಹೋಗಿ, ಹೊಸೂರ ಹೊರವಲಯದ ಕಿರು ಸೇತುವೆ ಕೆಳಗೆ ಶವ ಹಾಗೂ ಬೈಕ್‌ ಬಿಸಾಡಿದ್ದರು’ ಎಂದು ಕಡಕೋಳ ಠಾಣೆ ಪೊಲೀಸರು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.