ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಆಜೂರ ಗ್ರಾಮದ ರೈತ ನವನಾಥ ಮಾನೆ ಎನ್ನುವವರು ಎರಡು ಎಕರೆಯಲ್ಲಿ ಬೆಳೆದಿದ್ದ ದಾಳಿಂಬೆ ಗಿಡಗಳನ್ನು ಶುಕ್ರವಾರ ಕಡಿದು ಹಾಕಿದ್ದಾರೆ. ‘ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಸಿಗದಿರುವುದು ಹಾಗೂ ರೋಗ ಬಾಧೆಯಿಂದ ಕಂಗೆಟ್ಟು ಈ ನಿರ್ಧಾರಕ್ಕೆ ಬರಬೇಕಾಯಿತು’ ಎಂದು ತಿಳಿಸಿದ್ದಾರೆ.
‘ಹವಾಮಾನ ವೈಪರೀತ್ಯದಿಂದ ಬೆಳೆಗೆ ಹಲವು ರೋಗಗಳ ಬಾಧೆ ಕಾಣಿಸಿಕೊಳ್ಳುತ್ತಿದೆ. ಬೆಳೆಯಲು ₹ 3 ಲಕ್ಷದಿಂದ ₹ 4 ಲಕ್ಷ ವೆಚ್ಚವಾಗಿದೆ. ಆರು ವರ್ಷಗಳಿಂದ ಗಿಡಗಳನ್ನು ಬೆಳೆಸುತ್ರಿದ್ದೆ. ಪ್ರತಿ ವರ್ಷವೂ ನಷ್ಟವೇ ಆಗಿದೆ. ಕೈಗೆ ಬಂದ ಅಲ್ಪ ಸ್ವಲ್ಪ ಫಸಲಿಗೆ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸರಿಯಾದ ಬೆಲೆ ಸಿಗಲಿಲ್ಲ. ಮಾರುಕಟ್ಟೆಯೂ ಇರಲಿಲ್ಲ’ ಎಂದು ತಿಳಿಸಿದರು.
‘ತಾಲ್ಲೂಕಿನ ಹಲವರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಕೀಟನಾಶಕಗಳನ್ನು ಸಿಂಪಡಿಸಿ ರೋಗ ಬಾಧೆಯನ್ನು ಹತೋಟಿಗೆ ತರುತ್ತಾರೆ. ನನಗೆ ಖರ್ಚು ಭರಿಸುವ ಶಕ್ತಿ ಇಲ್ಲವಾದ್ದರಿಂದ ಗಿಡಗಳನ್ನು ನಾಶಪಡಿಸುತ್ತಿದ್ದೇನೆ. ಮುಂದೇನು ಮಾಡಬೇಕು ಎನ್ನುವುದು ತೋಚದಂತಾಗಿದೆ. ಸರ್ಕಾರವು ಪರಿಹಾರ ನೀಡಿದರೆ ಅನುಕೂಲವಾಗುತ್ತದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.