ADVERTISEMENT

‘ಸಂವಿಧಾನದ ಆಶಯಕ್ಕೆ ಬದ್ಧರಾಗಿ’

‘ಬುದ್ಧ– ಬಸವ– ಅಂಬೇಡ್ಕರ್’ ಕುರಿತು ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:36 IST
Last Updated 28 ಮಾರ್ಚ್ 2023, 5:36 IST
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ತಾಲ್ಲೂಕು ಘಟಕದಿಂದ ಈಚೆಗೆ ಆಯೋಜಿಸಲಾಗಿದ್ದ ಲಿಖಿತ ರಸಪ್ರಶ್ನೆ ಕಾರ್ಯಕ್ರಮವನ್ನು ಸಿ.ಆರ್ ಸಾಂಗ್ಲಿಕರ ಉದ್ಘಾಟಿಸಿದರು
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ತಾಲ್ಲೂಕು ಘಟಕದಿಂದ ಈಚೆಗೆ ಆಯೋಜಿಸಲಾಗಿದ್ದ ಲಿಖಿತ ರಸಪ್ರಶ್ನೆ ಕಾರ್ಯಕ್ರಮವನ್ನು ಸಿ.ಆರ್ ಸಾಂಗ್ಲಿಕರ ಉದ್ಘಾಟಿಸಿದರು   

ಅಥಣಿ: ‘ಡಾ.ಅಂಬೇಡ್ಕರ್ ನೇತೃತ್ವದ ತಂಡ ನೀಡಿರುವ ಸಂವಿಧಾನ ಸದೃಢ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಈ ಸಂವಿಧಾನದ ಮೂಲಕ ಸಮಾನತೆ, ಸರ್ವರಿಗೂ ಶಿಕ್ಷಣ ದೊರೆತಿದ್ದು, ಮೂಲಭೂತ ಹಕ್ಕುಗಳ ಜೊತೆ ಮೂಲಭೂತ ಕರ್ತವ್ಯಗಳ ಬಗ್ಗೆ ನಾವು ಗಮನ ಹರಿಸಬೇಕು’ ಅಥರ್ವ ಸಾಂಗ್ಲಿಕರ ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಸಾಂಗ್ಲಿಕರ ಹೇಳಿದರು.

ಪಟ್ಟಣದ ಆದರ್ಶ ನಗರದ ಅನಿಲ ಕಾಂಬಳೆ ಇವರ ಸಂಸ್ಕೃತ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಅಥಣಿ ತಾಲ್ಲೂಕು ಘಟಕದಿಂದ ಈಚೆಗೆ ‘ಬುದ್ಧ– ಬಸವ– ಅಂಬೇಡ್ಕರ್’ ಕುರಿತು ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡು ಬಂದಿರುವ ಏಕೈಕ ದೇಶ ಭಾರತ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಸಂವಿಧಾನದ ಆಶಯಕ್ಕೆ ಬದ್ಧರಾಗಿ ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸುವುದರ ಜೊತೆಗೆ ಮಹಾ ಮಾನವತಾವಾದಿಗಳ ಇತಿಹಾಸವನ್ನು ಪರಿಚಯಿಸುವ ಕಾರ್ಯವನ್ನು ದಲಿತ ಸಂಘರ್ಷ ಸಮಿತಿ ಸಂಘಟಕರು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ’ ಎಂದು ಹೇಳಿದರು.

ADVERTISEMENT

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸವರಾಜ ಬಿಸನಕೊಪ್ಪ ಮಾತನಾಡಿ, ‘ಇತಿಹಾಸವನ್ನು ಅರಿತವರು ಇತಿಹಾಸವನ್ನು ನಿರ್ಮಿಸಬಲ್ಲರು ಎಂಬ ಅಂಬೇಡ್ಕರ್ ಅವರ ವಿಚಾರಧಾರೆಯಂತೆ ಪ್ರತಿಯೊಬ್ಬರೂ ಇತಿಹಾಸವನ್ನು ಅರಿತುಕೊಳ್ಳಬೇಕು. ಅನೇಕ ಕಷ್ಟದ ದಿನಗಳಲ್ಲಿ ಇತಿಹಾಸವನ್ನು ಸೃಷ್ಟಿಸಿರುವ ಬುದ್ಧ, ಬಸವ, ಅಂಬೇಡ್ಕರ್‌ ಅವರ ವಿಚಾರಧಾರೆಗಳು ಇಂದಿಗೂ ನಮ್ಮೆಲ್ಲರಿಗೆ ದಾರಿದೀಪವಾಗಿವೆ. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆಯಿಂದ ಜ್ಞಾನವನ್ನು ಸಂಗ್ರಹಿಸಬೇಕು’ ಎಂದರು.

ಅಂಬೇಡ್ಕರ್ ಪರಿನಿರ್ವಣ ದಿನದ ಅಂಗವಾಗಿ ಕಳೆದ ಡಿಸೆಂಬರ್‌ನಲ್ಲಿ ಆಯೋಜಿಸಲಾಗಿದ್ದ ಲಿಖಿತ ರಸಪ್ರಶ್ನೆ ಕಾರ್ಯಕ್ರಮದ ವಿಜೇತರರಿಗೆ ಬಹುಮಾನ ವಿತರಿಸಲಾಯಿತು.

ಸಮಿತಿ ಜಿಲ್ಲಾ ಸಂಚಾಲಕ ಶ್ರೀಕಾಂತ ತಳವಾರ, ಜಿಲ್ಲಾ ಸಂಘಟನಾ ಸಂಚಾಲಕ ಸಂಜಯ ತಳವಲಕರ, ವಕೀಲ ಮೀತೇಶ ಪಟ್ಟಣ, ಪುರಸಭಾ ಸದಸ್ಯ ರಾವಸಾಬ ಐಹೊಳೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಅಥಣಿ ತಾಲ್ಲೂಕು ಘಟಕದ ಸಂಚಾಲಕ ರವಿ ಕಾಂಬಳೆ ಮಾತನಾಡಿದರು.

ಪುರಸಭಾ ಸದಸ್ಯ ಕಲ್ಲೇಶ ಮಡ್ಡಿ, ದಿಲೀಪ ಕಾಂಬಳೆ, ತಿಪ್ಪಣ್ಣ ಭಜಂತ್ರಿ, ಸಂಗಯ್ಯ ಪೂಜಾರಿ, ಪಾಂಡುರಂಗ ಕಾಂಬಳೆ, ಅಶೋಕ ಗೌರಗೊಂಡ, ಡಾ.ಜಗದೀಶ್ ಮಿರಜಕರ, ಸದಾಶಿವ ಕಾಂಬಳೆ, ಎಂ.ಎಂ.ಕಾಂಡೆಕರ, ಪರಶುರಾಮ ಚುಬಚಿ, ದಿಲೀಪ ಕಾಂಬಳೆ ಸಪ್ತಸಾಗರ, ಸದಾಶಿವ ಕಾಂಬಳೆ, ಅಶೋಕ ಗೌರಗೊಂಡ,ಅಮೀನ ಜಾತಗಾರ, ಭೀರಪ್ಪ ಕಾಂಬಳೆ, ಶ್ಯಾಮ ಕುಂಬಾರ, ಬಾಲಕೃಷ್ಣ ಭಜೇಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕುಮಾರ ಬನಸೋಡೆ ಸ್ವಾಗತಿಸಿದರು. ಸಚಿನ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ ಆಲಗುರ ವಂದಿಸಿದರು.

ವಿಜೇತರಿಗೆ ನಗದು ಬಹುಮಾನ
ಕಾಲೇಜು ವಿಭಾಗದಲ್ಲಿ ಅಥಣಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಗುರುಬಸು ಮೂಡಸಿ (ಪ್ರಥಮ– ₹ 25 ಸಾವಿರ ನಗದು), ಜಮಖಂಡಿ ಬಿ.ಎಲ್.ಡಿ ಕಾಲೇಜಿನ ಕಾದಂಬರಿ ದಿಲೀಪ ಕನ್ನಾಳ (ದ್ವಿತೀಯ ₹20 ಸಾವಿರ ನಗದು), ಅಥಣಿಯ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮಿ ಅನೀಲ ಧರಿಗೌಡರ (ತೃತೀಯ ₹ 15 ಸಾವಿರ ನಗದು) ಪಡೆದರು.

ಪ್ರೌಢಶಾಲೆ ವಿಭಾಗದಲ್ಲಿ ಸರ್ಕಾರಿ ಪ್ರೌಢ ಶಾಲೆ ಕೋಹಳ್ಳಿಯ ಸದಾಶಿವ ಶಿದಗೌಡ ಝರೆ (ಪ್ರಥಮ ₹15 ಸಾವಿರ), ಸರ್ಕಾರಿ ಪ್ರೌಢಶಾಲೆ ನದಿ ಇಂಗಳಗಾಂವದ ಸಂಜನಾ ಪ್ರಸಾದ ಕಾಂಬಳೆ (ದ್ವಿತೀಯ ₹10 ಸಾವಿರ). ಜಿ.ಎಚ್.ಎಸ್.ಜಿ ಸತ್ತಿಯ ಕಾವೇರಿ ಶ್ರೀಕಾಂತ ಕುಶಪ್ಪಣ್ಣವರ (ತೃತೀಯ ₹ 7,500) ಪಡೆದುಕೊಂಡರು.

ಪ್ರಾಥಮಿಕ ಶಾಲೆ ವಿಭಾಗದಲ್ಲಿ ಜಮಖಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಿಯಾಂಕಾ ಮಹಾವೀರ ಜಾಬಗೊಂಡ (ಪ್ರಥಮ ₹10 ಸಾವಿರ ನಗದು), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನದಿ ಇಂಗಳಗಾಂವದ ಲಕ್ಷ್ಮಿ ಮಹೇಶ ಯಳವಿ (ದ್ವಿತೀಯ ₹7,500 ನಗದು), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಥಣಿಯ ಎಸ್‌.ಸಿ. ಚಿಮ್ಮಡ (ತೃತೀಯ ₹5,000) ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.