ADVERTISEMENT

ಬೆಳಗಾವಿ: ವರ್ಷದೊಳಗೆ ದತ್ತ ಮಂದಿರ ನಿರ್ಮಾಣ–ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 2:01 IST
Last Updated 6 ಡಿಸೆಂಬರ್ 2025, 2:01 IST
ಬೆಳಗಾವಿ ತಾಲ್ಲೂಕಿನ ಶಿಂಧೋಳಿಯಲ್ಲಿ ಶುಕ್ರವಾರ ನಡೆದ ಗುರು ಚರಿತ್ರೆ ಪಾರಾಯಣ ಸಪ್ತಾಹ ಹಾಗೂ ದತ್ತ ಜಯಂತಿಯ ಉತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿದರು
ಬೆಳಗಾವಿ ತಾಲ್ಲೂಕಿನ ಶಿಂಧೋಳಿಯಲ್ಲಿ ಶುಕ್ರವಾರ ನಡೆದ ಗುರು ಚರಿತ್ರೆ ಪಾರಾಯಣ ಸಪ್ತಾಹ ಹಾಗೂ ದತ್ತ ಜಯಂತಿಯ ಉತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿದರು   

ಬೆಳಗಾವಿ: ‘ತಾಲ್ಲೂಕಿನ ಶಿಂಧೋಳಿ ಗ್ರಾಮದಲ್ಲಿ ಮುಂದಿನ ಒಂದು ವರ್ಷದೊಳಗೆ ದತ್ತ ಮಂದಿರ ಕಟ್ಟಡ ನಿರ್ಮಾಣ ಮಾಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು.

ಶಿಂಧೋಳ್ಳಿಯ ಕೆ.ಎಸ್.ಆರ್.ಟಿ.ಸಿ ಕಾಲೊನಿಯ ದತ್ತ ಜಯಂತಿ ಉತ್ಸವ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ ಗುರು ಚರಿತ್ರೆ ಪಾರಾಯಣ ಸಪ್ತಾಹ ಹಾಗೂ ದತ್ತ ಜಯಂತಿಯ ಉತ್ಸವದಲ್ಲಿ ಪಾಲ್ಗೊಂಡ, ಮಹಾಪ್ರಸಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನನಗೆ ಒಳಗೊಂದು, ಹೊರಗೊಂದು ಗೊತ್ತಿಲ್ಲ. ಎಲ್ಲರೂ ನನಗೆ ಸಮಾನ. ಚುನಾವಣೆ ಮುಗಿದ ಮೇಲೆ ಎಲ್ಲರೂ ನಮ್ಮವರೇ’ ಎಂದರು.

ADVERTISEMENT

‘ಏಳೂವರೆ ವರ್ಷದಲ್ಲಿ 150 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದು, ಅಧಿಕಾರ ಇದ್ದಾಗ ಕೆಲಸ ಮಾಡಬೇಕು. ನಾನು ಮಾಡುತ್ತಿದ್ದೇನೆ. ಶಿಂಧೋಳಿ ಜಾತ್ರೆ ಸಂದರ್ಭದಲ್ಲಿ ₹7 ಕೋಟಿ ವೆಚ್ಚದ ಕೆಲಸ ಮಾಡಿಸಿದ್ದೇನೆ. ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅದು ನಿಲ್ಲಬಾರದು, ಅಭಿವೃದ್ಧಿ ವಿಚಾರದಲ್ಲಿ ಹೆಸರು ಮಾಡುವ ಆಸೆ ನನಗಿದೆ. ಅಭಿವೃದ್ಧಿ ಮಾಡೇ ಮಾಡುತ್ತೇನೆ ಎನ್ನುವುದು ನನ್ನ ಹಠ. ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಇರಲಿ’ ಎಂದು ಹೇಳಿದರು.

ಈ ವೇಳೆ ಮುಖಂಡರಾದ ರಾಜು ಪಾಟೀಲ, ಸುರೇಶ ಪಾಟೀಲ, ರಾಕೇಶ ಪಾಟೀಲ, ಸತೀಶ ನಾಡಗೌಡ, ಶಿವು ಸೈಬಣ್ಣವರ, ನಾಗೇಶ್ ದೇಸಾಯಿ, ಮಲ್ಲಪ್ಪ ಶಹಾಪೂರಕರ, ಶೀಲಾ ತಿಪ್ಪಣ್ಣಗೋಳ, ಭಾರತಿ ಖಾನಾಪುರ, ಪಿಡಿಒ ಶ್ರೀದೇವಿ ಹಿರೇಮಠ ಸೇರಿದಂತೆ ಗ್ರಾಮಸ್ಥರು‌ ಇದ್ದರು.

ಸಾಯಿ ಮಂದಿರ ಉದ್ಘಾಟನೆ

ಮುತಗಾ ಗ್ರಾಮದ ಸಾಯಿ‌ ನಗರ ಪೊಲೀಸ್ ಕಾಲೊನಿಯಲ್ಲಿ ನಿರ್ಮಿಸಿದ ಸಾಯಿ ಮಂದಿರವನ್ನು ಲಕ್ಷ್ಮೀ ಹೆಬ್ಬಾಳಕರ ಶುಕ್ರವಾರ ಉದ್ಘಾಟಿಸಿದರು. ‘ನಾನು ಆಧ್ಯಾತ್ಮಿಕ ಜೀವಿ. ದೇವರು ಮಠಗಳೆಂದರೆ ಭಕ್ತಿ. ಅಧ್ಯಾತ್ಮ ಇರುವುದರಿಂದಲೇ ದೇಶದಲ್ಲಿ ಶಾಂತಿ ನೆಲೆಸಿದೆ. ಅಧಿಕಾರ ಸಿಕ್ಕಿದಾಗ ಶಾಶ್ವತವಾದ ಕೆಲಸ ಮಾಡಬೇಕು. ಜಾತ್ಯತೀತ ತತ್ವದ ಮೇಲೆ ಕೆಲಸ ಮಾಡಬೇಕು. ಅದನ್ನು ನಾನು ಮುಂದುವರಿಸಿದ್ದೇನೆ’ ಎಂದು ಸಚಿವೆ ಹೇಳಿದರು. ಈರಣ್ಣ ತಳವಾರ ರಮೇಶ ಕಮತಗೌಡರ ಬಸವರಾಜ ಜೀರಗೆ ಜಯಸಿಂಗ್ ರಜಪೂತ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.