ADVERTISEMENT

ಕಬ್ಬಿನ ಬಿಲ್ ಪಾವತಿಸದಿದ್ದರೆ ಶಿಸ್ತು ಕ್ರಮ

ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 12:51 IST
Last Updated 17 ಫೆಬ್ರುವರಿ 2021, 12:51 IST
ಬೆಳಗಾವಿಯಲ್ಲಿ ಬುಧವಾರ ನಡೆದ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ. ಕೊಡ್ಲಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಇದ್ದಾರೆ
ಬೆಳಗಾವಿಯಲ್ಲಿ ಬುಧವಾರ ನಡೆದ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ. ಕೊಡ್ಲಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಇದ್ದಾರೆ   

ಬೆಳಗಾವಿ: ‘ಅಧಿನಿಯಮದ ಪ್ರಕಾರ ರೈತರಿಗೆ ಕಬ್ಬಿನ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಕ್ಕರೆ ಕಾರ್ಖಾನೆಗಳ ಸಿಇಒಗಳು, ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಬ್ಬು ಪೂರೈಸಿದ ರೈತರಿಗೆ ಕಬ್ಬು ನಿಯಂತ್ರಣ ಅಧಿನಿಯಮದ ಪ್ರಕಾರ 14 ದಿನಗಳ ಒಳಗೆ ಬಿಲ್‌ ಪಾವತಿಸಬೇಕು ಎನ್ನುವ ನಿಯಮವಿದೆ. ಅದನ್ನು ಪಾಲಿಸಬೇಕು. ಸಕ್ಕರೆ ಕಾರ್ಖಾನೆಯವರು ಕೂಡಲೇ ರೈತರಿಗೆ ಬಿಲ್ ಪಾವತಿಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ADVERTISEMENT

‘2020–21ನೇ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಮೊತ್ತವನ್ನು ತ್ವರಿತವಾಗಿ ಪಾವತಿಸಬೇಕು. ಕಾರ್ಖಾನೆಗಳಿಗೆ ಜನವರಿ ಅಂತ್ಯದವರೆಗೆ ಕಬ್ಬು ನೀಡಿದ ರೈತರಿಗೆ ಫೆ.25ರ ಒಳಗೆ ಹಣ ಪಾವತಿಸಿ ವರದಿ ನೀಡಬೇಕು. ಕಬ್ಬು ಕಟಾವು ತಂಡದವರು ಕಬ್ಬು ಕಟಾವು ಮಾಡಲು ಹೆಚ್ಚಿನ ಮೊತ್ತ ಬೇಡಿಕೆ ಇಡುತ್ತಿರುವುದಾಗಿ ದೂರುಗಳು ರೈತರಿಂದ ಬಂದಿವೆ. ಹೀಗಾಗಿ, ರೈತರಿಂದ ಹಣದ ಬೇಡಿಕೆ ಇಡದಂತೆ ಆ ತಂಡದವರಿಗೆ ಕಾರ್ಖಾನೆಗಳವರು ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ತಾಕೀತು ಮಾಡಿದರು.

‘ಕಾರ್ಖಾನೆ ವತಿಯಿಂದ ನೇಮಿಸಿರುವ ಕಬ್ಬು ಕಟಾವು ತಂಡದವರು ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬೇಕು. ಬೆಂಗಳೂರು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ಕಾರ್ಖಾನೆ ನಿರ್ದೇಶಕರ ಸೂಚನೆಯಂತೆ ಸಕ್ಕರೆ ಮಾರಾಟಕ್ಕೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ. ಕೊಡ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.