
ಚಿಕ್ಕೋಡಿ: ‘ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 1200ಕ್ಕೂ ಹೆಚ್ಚು ಪಿಕೆಪಿಎಸ್ಗಳ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ₹2 ಲಕ್ಷ ಆರೋಗ್ಯ ವಿಮೆ, ₹10 ಲಕ್ಷ ಸಹಜ ಸಾವು ವಿಮೆ, ₹20 ಲಕ್ಷ ಅಪಘಾತ ವಿಮೆ ಮಾಡಿಸಲಾಗುವುದು’ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದಲ್ಲಿ ಜೊಲ್ಲೆ ಗ್ರುಪ್ ನಿಂದ ಡಿ.28ರ ವರೆಗೆ ನಡೆಯುವ 14ನೇ ಪ್ರೇರಣಾ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಡಿಸಿಸಿ ಬ್ಯಾಂಕ್ನಲ್ಲಿ ಕಳೆದ ಎರಡು ತಿಂಗಳಲ್ಲಿ ₹100 ಕೋಟಿ ಠೇವಣಿ ಹೆಚ್ಚಿದ್ದು, 2026ರ ಮಾರ್ಚ್ ಅಂತ್ಯದಲ್ಲಿ ಠೇವಣಿ ₹600 ಕೋಟಿಗೂ ಹೆಚ್ಚು ಸಂಗ್ರಹವಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿಯೇ ಬೆಳಗಾವಿ ಡಿಸಿಸಿ ಬ್ಯಾಂಕ್ನ್ನು ನಂಬರ್ ಒನ್ ಸ್ಥಾನಕ್ಕೆ ತರಬೇಕೆಂಬುವುದು ತಮ್ಮ ಗುರಿಯಾಗಿದೆ’ ಎಂದರು.
‘ರೈತ ಸ್ನೇಹಿಯಾಗಿರುವ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಸಹಕಾರದಿಂದ ನಿಪ್ಪಾಣಿಯ ಹಾಲಸಿದ್ದನಾಥ ಶುಗರ್ಸ್, ಸಂಕೇಶ್ವರದ ಹೀರಾ ಶುಗರ್ಸ್ ಹಾಗೂ ಹಿಡಕಲ್ ಡ್ಯಾಂ ಬಳಿಯ ಸಂಗಮ ಸಕ್ಕರೆ ಕಾರ್ಖಾನೆ ನಮ್ಮೊಂದಿಗಿವೆ. ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯ ರೀತಿಯಲ್ಲಿಯೇ ಹೀರಾ ಹಾಗೂ ಸಂಗಮ ಸಕ್ಕರೆ ಕಾರ್ಖಾನೆಗಳನ್ನು 10 ವರ್ಷಗಳಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ‘ಸಂಸಾರದಲ್ಲಿ ಗಂಡು, ಹೆಣ್ಣು ಬೇಧ ಭಾವ ತಾಳದೇ ಒಂದಾಗಿ ನಡೆಯಬೇಕು. ಒಬ್ಬರು ಮಾಡುವ ಕಾರ್ಯ ಮತ್ತೊಬ್ಬರಿಗೆ ಅರಿವಾಗಬೇಕು’ ಎಂದರು.
ಇಚಲಕರಂಜಿ-ಹಂಚಿನಾಳದ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ಮಾತಾನಾಡಿದರು. ಸದಲಗಾದ ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿ, ಹುಕ್ಕೇರಿಯ ವಿರಕ್ತಮಠದ ಶಿವಬಸವ ಸ್ವಾಮೀಜಿ, ಅಥಣಿ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ, ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಎಂ ಪಿ ಪಾಟೀಲ, ಬಸವರಾಜ ಕರ್ಲಟ್ಟಿ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಬಾಬುರಾವ ಮಾಳಿ, ಲಕ್ಷ್ಮಣ ಕಬಾಡೆ, ಸಿದ್ದು ನರಾಟೆ, ಬಸವಪ್ರಸಾದ ಜೊಲ್ಲೆ, ಯಶಸ್ವಿನಿ ಜೊಲ್ಲೆ, ರಾಜು ಕಾನಡೆ, ಬಾಳಾಸಾಹೇಬ ಜೋರಾಪೂರೆ, ಮೀನಾ ಪೋದ್ದಾರ, ಬಸಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.