ADVERTISEMENT

ಖಾನಾಪುರ: ರಂಗೇರದ ಡಿಸಿಸಿ ಬ್ಯಾಂಕ್ ಚುನಾವಣಾ ಕಣ

ಬಿಜೆಪಿ ನಾಯಕರಿಗೆ ನಾನೇಕೆ ‘ಅಂಜಲಿ’?

ಎಂ.ಮಹೇಶ
Published 2 ನವೆಂಬರ್ 2020, 16:02 IST
Last Updated 2 ನವೆಂಬರ್ 2020, 16:02 IST
ಡಾ.ಅಂಜಲಿ ನಿಂಬಾಳ್ಕರ್
ಡಾ.ಅಂಜಲಿ ನಿಂಬಾಳ್ಕರ್   

ಬೆಳಗಾವಿ: ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಚುನಾವಣೆಯಲ್ಲಿ ಖಾನಾಪುರ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಕಣ ರಂಗೇರಿದೆ.

ಅಲ್ಲಿನ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ ನಡುವೆ ತೀವ್ರ ಪೈಪೋಟಿ ಕಂಡುಬಂದಿರುವುದು ಇದಕ್ಕೆ ಕಾರಣ. ನ.6ರಂದು ಮತದಾನ ನಡೆಯಲಿದ್ದು, ಮತದಾರರಾಗಿರುವ ಸಹಕಾರ ಸಂಘಗಳ ಪ್ರತಿನಿಧಿಗಳ ಮನವೊಲಿಕೆಗಾಗಿ ಇಬ್ಬರೂ ಕಸರತ್ತು ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿನ ಸಾಂಪ್ರದಾಯಿಕ ಎದುರಾಳಿಗಳು ಇದೀಗ ಮತ್ತೊಮ್ಮೆ ಮುಖಾಮುಖಿ ಆಗಿರುವುದರಿಂದ, ಈ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಹಾಗೂ ಕುತೂಹಲ ಮೂಡುವಂತೆ ಮಾಡಿದೆ.

ಹೋದ ವಿಧಾನಸಭೆ ಚುನಾವಣೆ ಕಾಲಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯೊಂದಿಗೆ ಗುರುತಿಸಿಕೊಂಡಿದ್ದ ಅರವಿಂದ ಪಾಟೀಲ ಅವರಿಗೆ ಬಿಜೆಪಿ ಬೆಂಬಲ ಪ್ರಕಟಿಸಿರುವುದು ಕಣದಲ್ಲಿ ಪೈಪೋಟಿ ಹೆಚ್ಚಲು ಕಾರಣವಾಗಿದೆ.

ADVERTISEMENT

ಸದ್ದಿಲ್ಲದೆ ತೊಡಕಾದ ಸತೀಶ:ಎಲ್ಲ 16 ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಬೇಕು ಎಂದು ಬಿಜೆಪಿ ವರಿಷ್ಠರು ಹಾಗೂ ಆರ್‌ಎಸ್‌ಎಸ್‌ ನಾಯಕರು ಯೋಜಿಸಿದ್ದರು. ಅದರಂತೆ, ಜಿಲ್ಲೆಯ ಮುಖಂಡರಾದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಉಮೇಶ ಕತ್ತಿ ಹಾಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಎಲ್ಲ ಮುಖಂಡರೂ ಒಂದಾಗಿ ಅವಿರೋಧ ಆಯ್ಕೆಗೆ ಯತ್ನಿಸಿದ್ದರಾದರೂ, ಅವರ ಹಾದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸದ್ದಿಲ್ಲದೆ ತೊಡಕಾಗಿ ಪರಿಣಮಿಸಿದ್ದಾರೆ. ತಮ್ಮ ಬೆಂಬಲಿಗರು ಕಣದಲ್ಲಿ ಉಳಿಯುವಂತೆ ನೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪರಿಣಾಮ, ಬಿಜೆಪಿಯವರು ಯೋಜಿಸಿದಂತೆ ಅವಿರೋಧ ಆಯ್ಕೆ ಸಾಧ್ಯವಾಗಿಲ್ಲ.

ಖಾನಾಪುರ ಸೇರಿ 3 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದು ಸಹಕಾರ ಕ್ಷೇತ್ರದ ಚುನಾವಣೆಯಾದರೂ ಪಕ್ಷಗಳ ನಾಯಕರು ನೇರವಾಗಿಯೇ ಪೈಪೋಟಿಗೆ ಇಳಿದಿದ್ದಾರೆ.

ಮಹಿಳೆ ಸ್ಪರ್ಧೆ ವಿಶೇಷ:ಬಿಜೆಪಿಯವರಿಗೆ, ಖಾನಾಪುರದಲ್ಲಿ ಅಂಜಲಿ ಮುಳ್ಳಾಗಿದ್ದಾರೆ. ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಬಿಜೆಪಿ ಮುಖಂಡರಿಗೆ ಸೆಡ್ಡು ಹೊಡೆದಿದ್ದಾರೆ. ‘ಮತದಾರರೇ ಎಲ್ಲವನ್ನೂ ನಿರ್ಣಯಿಸಲಿ’ ಎಂದು ಘೋಷಿಸಿದ್ದಾರೆ. ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ.

ಅರವಿಂದ ಪಾಟೀಲ ಅವರಿಗೆ ಬೆಂಬಲ ನೀಡುವುದಾಗಿ ಬಿಜೆಪಿ ನಾಯಕರು ಬಹಿರಂಗವಾಗಿಯೇ ಘೋಷಿಸಿದ್ದಾರೆ. ಹೀಗಾಗಿ, ಒಂದರ್ಥದಲ್ಲಿ ಇದು ಬಿಜೆಪಿ– ಅಂಜಲಿ ನಡುವಿನ ಚುನಾವಣೆ ಎನ್ನುವ ‘ಬಣ್ಣ’ವನ್ನು ಪಡೆದುಕೊಂಡಿದೆ. ಮಹಿಳೆಯೊಬ್ಬರು ನಿರ್ದೇಶಕ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವುದರಿಂದಲೂ ಈ ಚುನಾವಣೆ ವಿಶೇಷ ಎನಿಸಿದೆ.

ಅರವಿಂದ ಪಾಟೀಲ ಅವರನ್ನು ಗೆಲ್ಲಿಸಿಕೊಳ್ಳುವ ಜೊತೆಗೆ ಬಿಜೆಪಿಗೆ ಸೇರಿಸಿಕೊಳ್ಳುವ ಯೋಜನೆಯೂ ಬಿಜೆಪಿ ನಾಯಕರದಾಗಿದೆ.

ರಾಮದುರ್ಗ ಕ್ಷೇತ್ರದಿಂದ ಭೀಮಪ್ಪ ಬೆಳವಣಿಕಿ ಮತ್ತು ಶ್ರೀಕಾಂತ ಡವಣ ಹಾಗೂ ನೇಕಾರರ ಕ್ಷೇತ್ರದಿಂದ ಗಜಾನನ ಕ್ವಳ್ಳಿ ಮತ್ತು ಕೃಷ್ಣ ಅನಗೋಳಕರ ನಡುವೆ ಹಣಾಹಣಿ ನಡೆದಿದೆ.

***

ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಇದೇ ಮೊದಲಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಪೈಪೋಟಿ ಎದುರಿಸಲು ಸಿದ್ಧವಾಗಿದ್ದೇನೆ. ಮತದಾರರು ನೀಡುವ ತೀರ್ಪಿಗೆ ಬದ್ಧವಾಗಿದ್ದೇನೆ
ಡಾ.ಅಂಜಲಿ ನಿಂಬಾಳ್ಕರ್

ಅಂಜಲಿ ಬೆಂಬಲ ಕೋರಿ ನನ್ನ ಬಳಿಗೆ ಬಂದಿದ್ದರು. ನಂತರ ಬಾಲಚಂದ್ರ ಜಾರಕಿಹೊಳಿ ಅವರನ್ನೂ ಸಂಪರ್ಕಿಸಿದ್ದರು. ಆದರೆ, ಸ್ಪಂದನೆ ಸಿಗದಿದ್ದರಿಂದ ಸ್ಪರ್ಧಿಸಿದ್ದಾರೆ. ನಾವು ಅರವಿಂದ ಪಾಟೀಲಗೆ ಬೆಂಬಲ ನೀಡಿದ್ದೇವೆ
ರಮೇಶ ಜಾರಕಿಹೊಳಿ,ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.