ಬೆಳಗಾವಿ: ಇಲ್ಲಿನ ಗೋವಾವೇಸ್ ಬಸವೇಶ್ವರ ವೃತ್ತದಲ್ಲಿ ‘ವಚನ ಬರೆಯುತ್ತಿರುವ ಬಸವೇಶ್ವರರ ಕಂಚಿನ ಪ್ರತಿಮೆ’ ಸ್ಥಾಪಿಸುವ ಕುರಿತು ಬುಧವಾರ ಚರ್ಚಿಸಲಾಯಿತು.
ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಕರೆದಿದ್ ಸಭೆಯಲ್ಲಿ, ಮುಖಂಡರು ಅಭಿಪ್ರಾಯ ಹಂಚಿಕೊಂಡರು.
ಸದ್ಯ ಅಲ್ಲಿರುವ ಪ್ರತಿಮೆ ಹಳೆತಾಗಿದೆ. ಹೀಗಾಗಿ, ಹೊಸದನ್ನು ಪ್ರತಿಷ್ಠಾಪಿಸುವುದು ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಅಶ್ವಾರೂಢ ಮತ್ತು ವಚನ ಬರೆಯುತ್ತಿರುವ ಪ್ರತಿಮೆಗಳ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ವಚನ ಬರೆಯುತ್ತಿರುವ ಬಸವೇಶ್ವರರ ಪ್ರತಿಮೆಗೆ ತೀರ್ಮಾನಿಸಲಾಯಿತು. ಸ್ಥಾಪನೆಗೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಎರಡು ಹಂತಗಳಲ್ಲಿ ₹ 50 ಲಕ್ಷ ಅನುದಾನ ನೀಡಲು ಭರವಸೆ ನೀಡಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ಮಹಾನಗರಪಾಲಿಕೆಯಿಂದ ₹ 10 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ಸಂಘಟಕರು ತಿಳಿಸಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿದರು. ಕಾರಂಜಿಮಠ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಮುಖಂಡರಾದ ಡಾ.ಎಫ್.ವಿ. ಮಾನ್ವಿ, ರಮೇಶ ಕಳಸಣ್ಣವರ, ಸೋಮನಿಂಗ ಮಾವಿನಕಟ್ಟಿ, ವಿ.ಕೆ. ಪಾಟೀಲ. ಸಚಿನ ಪಾಟೀಲ, ಈರಣ್ಣ ದಯನ್ನವರ, ವಕೀಲ ಎಂ.ಬಿ. ಝಿರಲಿ, ಬಸವರಾಜ ಜಗಜಂಪಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.