ಬೆಳಗಾವಿ: ಇಲ್ಲಿನ ಕೋಟೆ ಕೆರೆ ಆವರಣದಲ್ಲಿ ವಾಕಿಂಗ್ ಮಾಡಲು ವಿಧಿಸಿರುವ ಶುಲ್ಕವನ್ನು ರದ್ದುಗೊಳಿಸಲು ಆಗ್ರಹಿಸಿ ಪ್ರತಿದಿನ ವಾಕಿಂಗ್ ಮಾಡಲು ಬರುವ ಸುತ್ತಲಿನ ನಿವಾಸಿಗಳು ಭಾನುವಾರ ಕೆರೆಯ ಎದುರಿನ ರಸ್ತೆ ತಡೆದು ಪ್ರತಿಭಟಿಸಿದರು.
‘ನಾವು ಅನೇಕ ವರ್ಷಗಳಿಂದ ಇಲ್ಲಿ ಪ್ರತಿದಿನ ಬೆಳಿಗ್ಗೆ ವಾಕಿಂಗ್ ಮಾಡುತ್ತಿದದ್ದೇವೆ. ಸುತ್ತಲಿನ ಬಡಾವಣೆಯ ನಿವಾಸಿಗಳಿಗೆ ವಾಕಿಂಗ್ ಮಾಡಲು ಇರುವುದು ಇದೊಂದೆ ಸಾರ್ವಜನಿಕ ಸ್ಥಳ. ಇದಕ್ಕೂ ಶುಲ್ಕ ವಿಧಿಸಿದರೇ ಎಲ್ಲಿ ಹೋಗುವುದು. ಸಾರ್ವಜನಿಕರಿಂದ ಉದ್ಯಾನ ಪ್ರವೇಶಕ್ಕೆ ಬೇಕಾದರೇ ಶುಲ್ಕ ವಿಧಿಸಿಕೊಳ್ಳಿ, ಆದರೆ, ವಾಕಿಂಗ್ ಮಾಡಲು ಕೂಡ ಶುಲ್ಕ ನೀಡುವುದೆಂದರೇ ಹೇಗೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಾಕಿಂಗ್ ಮಾಡುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಿನ ಜಾವ 9 ಗಂಟೆಯವರೆಗೆ ಶುಲ್ಕದಿಂದ ವಿನಾಯಿತಿ ನೀಡಬೇಕು. ಇಲ್ಲದಿದ್ದರೇ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಬಸ್ ನಿಲ್ದಾಣದಿಂದ ಮಹಾಂತೇಶ ನಗರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ, ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಕೆಲಹೊತ್ತು ಸಂಚಾರ ಅಸ್ತವ್ಯಸ್ತವಾಯಿತು. ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.