ಬೆಳಗಾವಿ: ‘ವೃತ್ತಿಪರ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿ ರಾಜ್ಯ ನೇಕಾರ ಸೇವಾ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
‘ನೇಕಾರರ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸಬೇಕು. ನೇಕಾರ ಸಮ್ಮಾನ ಯೋಜನೆಗೆ ವಿದ್ಯುತ್ ಚಾಲಿತ ಮಗ್ಗಗಳಲ್ಲಿ ಕಾರ್ಯನಿರ್ವಹಿಸುವ ನೇಕಾರ ಕಾರ್ಮಿಕರನ್ನು ಸೇರಿಸಬೇಕು ಹಾಗೂ ವಾರ್ಷಿಕ ಕನಿಷ್ಠ ₹ 10ಸಾವಿರ ನೀಡಬೇಕು. 55 ವರ್ಷದವರಿಗೆ ₹ 5 ಸಾವಿರ ಮಾಸಾಶನ ವಿತರಿಸಬೇಕು. ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕು’ ಎಂದು ಒತ್ತಾಯಿಸಿದರು.
‘ನೇಕಾರರು ಸಿದ್ಧಪಡಿಸಿರುವ ಸೀರೆಗಳ ಖರೀದಿ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸಬೇಕು. ಶೂನ್ಯ ಬಡ್ಡಿ ದರದಲ್ಲಿ ದುಡಿಯುವ ಬಂಡವಾಳ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿರುವ ವಿದ್ಯುತ್ ಚಾಲಿತ ಮಗ್ಗಗಳ ಗಣತಿ ನಡೆಸಬೇಕು. ಕೆಎಚ್ಡಿಸಿಯಿಂದ ನೇಕಾರರ ಶ್ರೇಯೋಭಿವೃದ್ಧಿಗಾಗಿ ಆವೃತ್ತ ನಿಧಿ ಸ್ಥಾಪನೆಯಾಗಬೇಕು. ನಿಗಮದ ₹ 108 ಕೋಟಿ ಸಾಲವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಶಿವಲಿಂಗ ಜಿ. ಟಿರಕಿ, ನೇಕಾರ ಕಾರ್ಮಿಕರ ಬಳಗದ ರವಿ ಪಾಟೀಲ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.