ADVERTISEMENT

ಸಮೀಕ್ಷೆ; ನೇಕಾರಿಕೆ ಸಂಬಂಧಿಸಿದವರ ಸೇರ್ಪಡೆಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಮೇ 2020, 14:02 IST
Last Updated 22 ಮೇ 2020, 14:02 IST

ಬೆಳಗಾವಿ: ರಾಜ್ಯದ ವಿದ್ಯುತ್ ಮಗ್ಗಗಳ ನೇಕಾರರಿಗೆ ಆರ್ಥಿಕ ಪರಿಹಾರ ನೀಡಲು ಜವಳಿ ಇಲಾಖೆ ನಡೆಸಲಿರುವ ಸಮೀಕ್ಷೆ ಕಾರ್ಯದಲ್ಲಿ ನೇಕಾರಿಕೆಗೆ ಸಂಬಂಧಿಸಿದ ಎಲ್ಲ ಕೆಲಸಗಾರರನ್ನು ಪರಿಗಣಿಸಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜವಳಿ ಸಚಿವ ಶ್ರೀಮಂತ ಪಾಟೀಲ ಅವರನ್ನು ಒತ್ತಾಯಿಸಿದೆ.

ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ
ಮುಖ್ಯಮಂತ್ರಿ ಹಾಗೂ ಜವಳಿ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

‘ರಾಜ್ಯ ಸರ್ಕಾರ 1.25 ಲಕ್ಷ ವಿದ್ಯುತ್ ಮಗ್ಗಗಳ ನೇಕಾರರಿಗೆ ಮಾತ್ರ ₹ 2 ಸಾವಿರ ಪರಿಹಾರ ಘೋಷಿಸಿದೆ. ಆದರೆ ವಾಸ್ತವವಾಗಿ ಸೀರೆಗಳನ್ನು ತಯಾರಿಸುವ ಮುನ್ನ ನಡೆಯುವ ಪ್ರಕ್ರಿಯೆಗಳಲ್ಲಿ ತೊಡಗುವ ವೈಂಡಿಂಗ್ ಮಾಡುವವರು, ರೀಲ್ ತಯಾರಿಸುವವರು, ಕಂಡಕಿ ಸುತ್ತುವವರು, ಡಿಸೈನ್ ಹಾಕುವವರು, ನೂಲಿಗೆ ಬಣ್ಣ ಹಾಕುವವರು, ಹಣಗಿ ಕೆಚ್ಚುವವರು, ಸೀರೆಗಳು ತಯಾರಾದ ನಂತರ ಸೀರೆಗಳನ್ನು ಘಳಿಗೆ ಹಾಕುವವರು, ಇಸ್ತ್ರೀ ಮಾಡುವವರು ಸದ್ಯದ ಪರಿಸ್ಥಿತಿಯಲ್ಲಿ ತೀವ್ರ ಸಂಕಷ್ಟವನ್ನು
ಎದುರಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಇವರನ್ನೂ ಸಮೀಕ್ಷೆಯಲ್ಲಿ ಸೇರ್ಪಡೆ ಮಾಡಬೇಕು. ಹೊರತು, ಕೇವಲ ವಿದ್ಯುತ್ ಮಗ್ಗಗಳ ಸಂಖ್ಯೆಯನ್ನು ಆಧರಿಸಿ ಪರಿಹಾರ ನೀಡಬಾರದು. ಹೀಗೆ ಮಾಡಿದರೆ ನೇಕಾರರಲ್ಲಿ ತಾರತಮ್ಯ ಮಾಡಿದಂತಾಗುತ್ತದೆ. ಅಲ್ಲದೇ ಬಹುಸಂಖ್ಯಾತ ನೇಕಾರರಿಗೆ ತೀವ್ರ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.