ಬೆಳಗಾವಿ:ಔರಾದಕರವರದಿಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಯುವ ಮಂಚ್ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಗಜಾನನ ದೇವರಮನಿ ಮಾತನಾಡಿ, ‘ಪೊಲೀಸ್ ಇಲಾಖೆಯ ಸಿಬ್ಬಂದಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳಿಂದ ವಂಚಿತವಾಗುತ್ತಿದ್ದಾರೆ. ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಪೊಲೀಸರು, ಸೇವಾ ಅವಧಿ ಆಧರಿಸಿ ನೀಡುವ ಬಡ್ತಿಗಳಿಂದ ವಂಚಿತವಾಗುತ್ತಿದ್ದಾರೆ. ಉಳಿದ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು 5 ರಿಂದ 6 ವರ್ಷಗಳಲ್ಲಿ ಬಡ್ತಿ ಹೊಂದಿದರೆ, ಪೊಲೀಸ್ ಇಲಾಖೆಯ ಸಿಬ್ಬಂದಿ 10 ರಿಂದ 15 ವರ್ಷಗಳ ಕಾಲ ಕಾಯಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಪೊಲೀಸರಿಗೆ 5 ವರ್ಷಗಳಿಗೊಮ್ಮೆ ಬಡ್ತಿ ನೀಡಬೇಕು. ವಾರಕ್ಕೊಂದು ಕಡ್ಡಾಯ ರಜೆ ನೀಡಬೇಕು’ ಎಂದು ಆಗ್ರಹಿಸಿದರು.
‘ಪೊಲೀಸ್ ಸಿಬ್ಬಂದಿಯ ವೇತನವೂ ಕಡಿಮೆ ಇದ್ದು, ಭತ್ಯೆಗಳಿಂದಲೂ ವಂಚಿತವಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪರಿಶೀಲನೆಗೆ ರಚಿಸಿದ್ದ ರಾಘವೇಂದ್ರಔರಾದಕರಸಮಿತಿಯೂವರದಿನೀಡಿ 2 ವರ್ಷ ಕಳೆದರೂ, ವರದಿಯನ್ನು ಅನುಷ್ಟಾನಗೊಳಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಕೂಡಲೇ ವರದಿಯನ್ನು ಅನುಷ್ಟಾನಗೊಳಿಸಬೇಕು’ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾರ್ಯಕರ್ತರಾದ ಸಾಗರ ಚಾಗುಲ್, ಆನಂದ ಶಿರದ, ಸಂತೋಷ ಹಲಗೇಕರ, ರಾಹುಲ್ ಕೋಲಕಾರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.