ಬೆಳಗಾವಿ: ‘ಕೊರೊನಾ ಕಟ್ಟಿ ಹಾಕಲು ಮಾಡಿದ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಅನೇಕ ವರ್ಗದವರಿಗೆ ₹ 1,250 ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯ ಶ್ಲಾಘನೀಯವಾಗಿದೆ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ಬುಧವಾರ ಪ್ರಕಟಣೆ ನೀಡಿರುವ ಅವರು, ‘ಅನೇಕ ಶ್ರಮಿಕ ವರ್ಗ ಲಾಕ್ಡೌನ್ನಿಂಧ ಬಹಳಷ್ಟು ತೊಂದರೆಗೆ ಒಳಗಾಗಿತ್ತು. ಅವರ ಸಹಾಯಕ್ಕೆ ಸರ್ಕಾರ ಮುಂದಾಗಿರುವುದರಿಂದ, ಉಪ ಜೀವನಕ್ಕೆ ಸ್ವಲ್ಪ ಸಹಕಾರಿಯಾದಂತಾಗಿದೆ’ ಎಂದಿದ್ದಾರೆ.
‘ಮುಂಗಾರು ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ರೈತರಿಗೂ ನೆರವು ನೀಡಲಾಗಿದೆ. ರೈತರು ಹಾಗೂ ಸ್ವಸಹಾಯ ಸಂಘಗಳ, ಸೊಸೈಟಿ ಸಾಲ, ಭೂ ಅಭಿವೃದ್ಧಿ ಬ್ಯಾಂಕ್ ಮೂಲಕ ಪಡೆದ ಸಾಲಗಳ ಮರುಪಾವತಿ ದಿನಾಂಕವನ್ನು ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡುವ ಮೂಲಕ ಮುಖ್ಯಮಂತ್ರಿಯು ಮತ್ತೊಮ್ಮೆ ರೈತರಿಗೆ ಆಸರೆಯಾಗಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎದೆಗುಂದದೆ ಸರ್ವ ಶ್ರಮಿಕ ವರ್ಗಕ್ಕೆ ಆರ್ಥಿಕ ನೆರವು ನೀಡಿದ ಅವರ ನಡೆಯು, ಟೀಕಿಸುವುದನ್ನೇ ಮೈಗೂಡಿಸಿಕೊಂಡ ವಿರೋಧ ಪಕ್ಷದವರಿಗೆ ಹತಾಶ ಭಾವನೆ ಕಾಡುವಂತೆ ಮಾಡಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.