ADVERTISEMENT

ಬೆಳಗಾವಿ: ಒನಕೆ ಚಳವಳಿಗೂ ಅನುಮತಿಗೆ ಆಗ್ರಹ

ಕರಾಳ ದಿನಾಚರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 10:19 IST
Last Updated 29 ಅಕ್ಟೋಬರ್ 2020, 10:19 IST
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಕರಾಳ ದಿನಾಚರಣೆಗೆ ಅನುಮತಿ ನೀಡಿದರೆ, ನಾವು ನಡೆಸುವ ಒನಕೆ ಚಳವಳಿಗೂ ಅನುಮತಿ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆಯವರು ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಕರಾಳ ದಿನಾಚರಣೆಗೆ ಅನುಮತಿ ನೀಡಿದರೆ, ನಾವು ನಡೆಸುವ ಒನಕೆ ಚಳವಳಿಗೂ ಅನುಮತಿ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆಯವರು ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು   

ಬೆಳಗಾವಿ: ‘ಇಲ್ಲಿ ನ. 1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಕರಾಳ ದಿನಾಚರಣೆಗೆ ಅನುಮತಿ ನೀಡಿದರೆ, ನಾವು ನಡೆಸಲು ಉದ್ದೇಶಿಸಿರುವ ಒನಕೆ ಚಳವಳಿಗೂ ಅನುಮತಿ ಕೊಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು.

‘ಕನ್ನಡ ರಾಜ್ಯೋತ್ಸವವನ್ನು ವಿರೋಧಿಸಿ ಎಂಇಎಸ್‌ನವರು ಕರಾಳ ದಿನಾಚರಣೆ ನಡೆಸುತ್ತಲೇ ಬಂದಿದ್ದಾರೆ. ಈ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ನಾಡದ್ರೋಹಿ ಕೆಲಸದಲ್ಲಿ ತೊಡಗುತ್ತಿದ್ದಾರೆ. ಸಮಿತಿಯವರಿಗೆ ಪ್ರತಿ ವರ್ಷವೂ ಕೊನೆ ಕ್ಷಣದಲ್ಲಿ ಅನುಮತಿ ನೀಡುತ್ತಾ ಬಂದಿರುವ ಜಿಲ್ಲಾಡಳಿತ ಹಾಗೂ ಪೊಲೀಸರ ಕ್ರಮ ಕನ್ನಡಿಗರ ನೋವಿಗೆ ಕಾರಣವಾಗುತ್ತಿದೆ. ರಾಜ್ಯದ ಸ್ವಾಭಿಮಾನ ಕಾಯಬೇಕಾದ ಜಿಲ್ಲಾಡಳಿತವೇ ನಾಡದ್ರೋಹಿಗಳಿಗೆ ಅವಕಾಶ ಕಲ್ಪಿಸುವುದು ವಿಷಾದನೀಯ’ ಎಂದರು.

‘ಈ ಬಾರಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ಕೊಡಬಾರದು. ಒಂದು ವೇಳೆ ರಾಜಕೀಯಕ್ಕೆ ಮಣಿದು ಕೊನೆ ಗಳಿಗೆಯಲ್ಲಿ ಅನುಮತಿ ಕೊಟ್ಟಲ್ಲಿ ನಮ್ಮ ಸೇನೆಯಿಂದ, ಎಂಇಎಸ್‌ನವರು ಕರಾಳ ದಿನಾಚರಣೆ ನಡೆಸುವ ಸ್ಥಳದಲ್ಲೇ ಒನಕೆ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ. ಅವರು ಮೆರವಣಿಗೆ ನಡೆಸುವ ಮಾರ್ಗದಲ್ಲೇ ನಾವೂ ಒನಕೆ ಹಾಗೂ ಕನ್ನಡ ಬಾವುಟಗಳನ್ನು ಹಿಡಿದು ಮೆರವಣಿಗೆ ನಡೆಸಬೇಕಾಗುತ್ತದೆ. ಎಂಇಎಸ್‌ಗೆ ತಕ್ಕ ಉತ್ತರ ನೀಡಬೇಕಾಗುತ್ತದೆ. ಅಂದು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾದರೆ ಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಸಂಗೋಡಿ ಎಚ್ಚರಿಕೆ ನೀಡಿದರು.

ADVERTISEMENT

ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಶೀಲವಂತ, ಬಸವರಾಜ ದೊಡಮನಿ, ಮಂಜುನಾಥ, ಶ್ರೀಕಾಂತ ಹಂಪನವರ, ನಾಗರಾಜ ದೊಡಮನಿ, ಪ್ರವೀಣ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.