ಬೆಳಗಾವಿ: ತಾಲ್ಲೂಕಿನ ಮಚ್ಚೆ ಗ್ರಾಮದ ಲಕ್ಷ್ಮಿ ನಗರದ ಹೊರವಲಯದಲ್ಲಿ ಶನಿವಾರ ಸಂಜೆ ಐದು ತಿಂಗಳ ಗರ್ಭಿಣಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಅದೇ ಗ್ರಾಮದವರಾದ ರೋಹಿಣಿ ಗಂಗಪ್ಪ ಹುಲಿಮನಿ (22) ಹಾಗೂ ರಾಜಶ್ರೀ ರವಿ ಬನ್ನೂರ (21) ಕೊಲೆಯಾದವರು.
‘ಅವರು ವಾಯುವಿಹಾರಕ್ಕೆಂದು ಬ್ರಹ್ಮದೇವರ ದೇವಸ್ಥಾನದ ಕಡೆಗೆ ಹೋಗಿದ್ದಾಗ ಘಟನೆ ನಡೆದಿದೆ. ದ್ವಿಚಕ್ರವಾಹನದಲ್ಲಿ ಬಂದಿದ್ದವರು ಮಹಿಳೆಯರ ಕಣ್ಣಿಗೆ ಖಾರದ ಪುಡಿ ಎರಚಿ, ನಂತರ ಕತ್ತಿಗೆ ಕೊಯ್ದು ಹಾಗೂ ಬೆನ್ನಿಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.ಜೋಡಿ ಕೊಲೆ ಘಟನೆಯಿಂದಾಗಿ ಬಡಾವಣೆಯ ಜನರು ಬೆಚ್ಚಿ ಬಿದ್ದಿದ್ದಾರೆ.ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.
‘ಕೊಲೆಗೆ ಖಚಿತ ಕಾರಣ ತಿಳಿದುಬಂದಿಲ್ಲ. ಅದರೆ, ಸುಳಿವು ಸಿಕ್ಕಿದೆ’ ಎಂದು ಆಯುಕ್ತರು ತಿಳಿಸಿದರು.ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.