ADVERTISEMENT

ಕೋವಿಡ್ ಕರ್ಫ್ಯೂ: ಬೆಳಗಾವಿ ಜಿಲ್ಲೆ ಬಹುತೇಕ ಸ್ತ‌ಬ್ಧ

ಅನವಶ್ಯ ಓಡಾಟಕ್ಕೆ ಪೊಲೀಸರಿಂದ ತಡೆ, ‘ಬ್ಯಾರಿಕೇಡ್ ಬೇಲಿ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 16:10 IST
Last Updated 7 ಜನವರಿ 2022, 16:10 IST
ಬೆಳಗಾವಿಯಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಅಂಗಡಿಗಳನ್ನು ಶುಕ್ರವಾರ ರಾತ್ರಿ ಬಂದ್‌ ಮಾಡಿಸಿದರು
ಬೆಳಗಾವಿಯಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಅಂಗಡಿಗಳನ್ನು ಶುಕ್ರವಾರ ರಾತ್ರಿ ಬಂದ್‌ ಮಾಡಿಸಿದರು   

ಬೆಳಗಾವಿ: ಕೋವಿಡ್ ಹಾಗೂ ಓಮೈಕ್ರಾನ್ ಹರಡುವಿಕೆ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ‘ಕರ್ಫ್ಯೂ’ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರಿಂದ ಸ್ಪಂದನೆ ದೊರೆತಿದೆ.

ಶುಕ್ರವಾರ ರಾತ್ರಿ 8ರಿಂದಲೇ ಆರಂಭವಾಗಿರುವ ಕರ್ಫ್ಯೂ ಸೋಮವಾರ ಬೆಳಿಗ್ಗೆವರೆಗೂ ಜಾರಿಯಲ್ಲಿರಲಿದೆ. ಜನರ ಓಡಾಟಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅದರಂತೆ, ಪೊಲೀಸರು ಸಂಜೆಯಿಂದಲೇ ಅಂಗಡಿ–ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚನೆ ನೀಡುತ್ತಿದ್ದರು. ರಾತ್ರಿ 8ರ ನಂತರ ಮುಚ್ಚಿಸಿದರು. ಜನರನ್ನು ಮಾರುಕಟ್ಟೆ ಮೊದಲಾದ ಪ್ರದೇಶಗಳಿಂದ ಮನೆಗಳತ್ತ ಕಳುಹಿಸಿದರು. ಮಾರ್ಗಸೂಚಿ ಪಾಲಿಸುವಂತೆ ಸೂಚಿಸಿದರು.

ಜನರು ಅನವಶ್ಯವಾಗಿ ಸಂಚರಿಸುವುದನ್ನು ತಡೆಯಲು ಎಲ್ಲೆಡೆ ‘ಬ್ಯಾರಿಕೇಡ್ ಬೇಲಿ’ ಹಾಕಲಾಗಿದೆ. ವೃತ್ತಗಳಲ್ಲಿ ಸೇರಿದಂತೆ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಇದರಿಂದಾಗಿ ರಾತ್ರಿ ಆಗುತ್ತಿದ್ದಂತೆಯೇ, ನಗರವು ಬಹುತೇಕ ಸ್ತಬ್ಧವಾಗಿತ್ತು.

ADVERTISEMENT

ಆಹಾರ, ದಿನಸಿ, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಅಂಗಡಿಗಳು ಹಾಗೂ ಪ್ರಾಣಿಗಳಿಗೆ ಮೇವು ಪೂರೈಸುವ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಕಾರ್ಯ ನಿರ್ವಹಿಸಬಹುದು. ರೆಸ್ಟೊರೆಂಟ್‌ ಮತ್ತು ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶವಿದೆ ಮತ್ತು ಮನೆಗಳಿಗೆ ತಲುಪಿಸಲು ಅನುಮತಿಸಲಾಗಿದೆ. ಉಳಿದ ಎಲ್ಲ ಅಂಗಡಿಗಳನ್ನು ಮುಚ್ಚಲು ಮಾರ್ಗಸೂಚಿ ಪ್ರಕಾರ ಆದೇಶ ಮಾಡಲಾಗಿದೆ.

ತೆರೆದ ಸ್ಥಳಗಳಲ್ಲಿ ನಿಗದಿಯಾದ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 200 ಜನರಿಗೆ ಸೀಮಿತಗೊಳಿಸಲಾಗಿದೆ. ಮುಚ್ಚಿದ ಸ್ಥಳಗಳಲ್ಲಿನ ಮದುವೆಗೆ 100 ಜನರಿಗೆ ಸೀಮಿತಗೊಳಿಸಲಾಗಿದೆ. ಉದ್ಯಾನ ಪ್ರವೇಶಕ್ಕೆ ಅನುಮತಿ ನೀಡಿಲ್ಲ.

ಕಟ್ಟುನಿಟ್ಟಾಗಿ ಪಾಲಿಸಬೇಕು:

‘ವಾರಾಂತ್ಯ ಕರ್ಫ್ಯೂ ಜಾರಿ ಹಿನ್ನೆಲೆ ಮಾರ್ಗಸೂಚಿಯನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವಶ್ಯವಿಲ್ಲವಾದರೆ ರಸ್ತೆಗೆ ಇಳಿಯದಿರುವುದು ಒಳಿತು. ಅನಿವಾರ್ಯವಿದ್ದರೆ ಮಾತ್ರ ಹೊರಗಡೆ ಬರಬೇಕು. ದಿನಸಿ, ತರಕಾರಿ ಖರೀದಿ, ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಸಂಚರಿಸಬೇಕು. ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪೊಲೀಸರಿಗೆ ಸಹಕಾರ ಕೊಡಬೇಕು’ ಎಂದು ತಿಳಿಸಿದರು.

‘ಕಿರಾಣಿ, ಹಾಲು–ಹಾಲಿನ ಉತ್ಪನ್ನಗಳು, ತರಕಾರಿ ಅಂಗಡಿ ಸೇರಿದಂತೆ ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಬಹುದು. ಸಮೀಪದ ಆಸ್ಪತ್ರೆ ಬಿಟ್ಟು 4ರಿಂದ 5 ಕಿ.ಮೀ. ದೂರ ಬಂದರೆ ಅಂಥವರನ್ನು ಪರಿಶೀಲಿಸಲಾಗುವುದು. ಅಗತ್ಯ ವಸ್ತುಗಳನ್ನು ಸಮೀಪದ ಅಂಗಡಿಯಲ್ಲೇ ಖರೀದಿಸಬೇಕು’ ಎಂದು ಕೋರಿದರು.

ಡಿಸಿಪಿಗಳಾದ ವಿಕ್ರಂ ಅಮಟೆ ಹಾಗೂ ಪಿ.ವಿ. ಸ್ನೇಹಾ ಇದ್ದರು.

ಬಸ್‌ಗಳ ಕಾರ್ಯಾಚರಣೆ:‘ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಸಂಸ್ಥೆಯ ಬಸ್ಸುಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ. ಆದರಂತೆ ಸಾರಿಗೆ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಅವಶ್ಯ ಪ್ರಯಾಣಿಕರ ಸಂಖ್ಯೆ ಹಾಗೂ ಆನ್‌ಲೈನ್‌ ಬುಕ್ಕಿಂಗ್‌ ಆಧರಿಸಿ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಪ್ರಕಟಣೆ ತಿಳಿಸಿದೆ.

ತೆಲಸಂಗ ವರದಿ

ತೆಲಸಂಗ: ‘ಕೊರೊನಾ ವೈರಸ್ ಸೋಂಕು ಹೆಚ್ಚಿದ್ದು, ನಿಯಂತ್ರಣಕ್ಕಾಗಿ ಶನಿವಾರ ಹಾಗೂ ಭಾನುವಾರ ಕರ್ಫ್ಯೂ ಇರುತ್ತದೆ. ಅದನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಎಸ್‍ಐ ಎಸ್.ಪಿ. ಸವದಿ ಹೇಳಿದರು.

ಗ್ರಾಮದಲ್ಲಿ ಕರ್ಫ್ಯೂ ಬಗ್ಗೆ ಜನರಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ‘ಅನಗತ್ಯವಾಗಿ ಸಂಚರಿಸದೆ, ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ಕೊಡಬೇಕು’ ಎಂದರು.

ಗ್ರಾ.ಪಂ. ಸದಸ್ಯ ಸಿದ್ದಲಿಂಗ ಮಾದರ, ಕಾಶಿನಾಥ ಕುಂಬಾರಕರ, ಮಸ್ತಾನ ನಧಾಫ್, ಶಂಕರ ರೋಡಗಿ, ಗಜಾನನ ಮಾದರ, ಸಂಗಮೇಶ ಕುಮಠಳ್ಳಿ, ರವಿ, ವಿಜಯ, ಹುಸೇನ, ಸುನೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.