ರಾಮದುರ್ಗ: ಕಡಲೆ ಕೊಯ್ಲು ಮಾಡುವುದಕ್ಕಾಗಿ ಕಬ್ಬಿಣದ ಚಕ್ಕಡಿಯಲ್ಲಿ ಗುರುವಾರ ಬೆಳಿಗ್ಗೆ ಹೊಲಕ್ಕೆ ಹೊರಟ್ಟಿದ್ದ ಕೆ.ತಿಮ್ಮಾಪುರ ಗ್ರಾಮದ ಒಂದೇ ಕುಟುಂಬದ ನಾಲ್ವರು, ತುಂಡಾಗಿ ಬಿದ್ದಿದ್ದ ಪ್ರವಹಿಸುತ್ತಿದ್ದ ವಿದ್ಯುತ್ ತಂತಿ ತುಳಿದು ಸಾವಿಗೀಡಾಗಿದ್ದಾರೆ.
ರೇವಪ್ಪ ಹನಮಂತ ಕಲ್ಲೋಳ್ಳಿ (35), ಪತ್ನಿ ರತ್ನವ್ವ (28), ಮಗ ಕೃಷ್ಣ (5), ಅಣ್ಣನ ಮಗ ಚೇತನ್ (3) ಮೃತರು. ಇವರೊಂದಿಗೆ ಜೋಡೆತ್ತು ಸಾವಿಗೀಡಾಗಿವೆ. ಚಕ್ಕಡಿಯಲ್ಲಿದ್ದ ಮಕ್ಕಳು ಲಕ್ಷ್ಮಿ ಹಾಗೂ ಫಕೀರವ್ವ ಪಾರಾಗಿದ್ದಾರೆ.
ಎರಡು ದಿನಗಳ ಹಿಂದೆಯೇ ತಂತಿ ತುಂಡಾಗಿ ಬಿದ್ದಿದ್ದು ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಹೆಸ್ಕಾಂನ ಸಾಲಹಳ್ಳಿ ಕಚೇರಿ ಸಿಬ್ಬಂದಿಯ ಗಮನಕ್ಕೆ ತಂದರೂ ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮೃತರಿಗೆ ತಲಾ ₹ 5 ಲಕ್ಷ ಮತ್ತು ಜೋಡೆತ್ತುಗಳಿಗೆ ತಲಾ 50 ಸಾವಿರ ಸೇರಿ ₹ 21 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಘಟನೆ ಸಂಬಂಧ ಸಾಲಹಳ್ಳಿಯ ಸೆಕ್ಷನ್ ಆಫೀಸರ್ ಈರಣ್ಣ ನಾಯ್ಕರ ಮತ್ತು ಲೈನ್ಮನ್ ಬಸವರಾಜ ಕಡಕೋಳ ಅವರನ್ನು ಅಮಾನತುಗೊಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.