ADVERTISEMENT

ನಕಲಿ ನೋಟು ಚಲಾವಣೆಗೆ ಯತ್ನ; 7 ಆರೋಪಿಗಳ ಬಂಧನ

ಗ್ರಾಮ ಲೆಕ್ಕಾಧಿಕಾರಿ, ರಾಜಕೀಯ ಮುಖಂಡರು ಭಾಗಿ?

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 15:24 IST
Last Updated 7 ಜನವರಿ 2019, 15:24 IST

ಬೆಳಗಾವಿ: ₹ 2,000 ಹಾಗೂ ₹ 200 ಮುಖಬೆಲೆಯ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸಿದ ಸವದತ್ತಿ ತಾಲ್ಲೂಕಿನ ತಲ್ಲೂರ ಗ್ರಾಮದ ಏಳು ಜನ ಆರೋಪಿಗಳನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ.

ಶಿವಾನಂದ ಶಂಕ್ರಪ್ಪ ಕಾಶಪ್ಪನವರ, ಶರೀಫ್‌ ಗುಡುಸಾಬ್‌ ಸಾಬರ್‌, ಪ್ರವೀಣ ಶಿವಲಿಂಗಪ್ಪ ಸರದಾರ, ಮೀರಾಸಾಬ್‌ ಕುತುಬಸಾಬ್‌ ಮುಲ್ಲಾ, ಚೇತನ ವೀರಣ್ಣ ಗೌಡರ, ಕುಮಾರ ಈರಣ್ಣಾ ಅಂಗಡಿ ಹಾಗೂ ಜಿಯಾವುಲ್ಲಾ ಗುಡುಸಾಬ ಚಪಾಟಿ ಬಂಧಿತರು.

ಕಿರಾಣಿ ಅಂಗಡಿಯಲ್ಲಿ ಚಲಾವಣೆಗೆ ಯತ್ನ:

ADVERTISEMENT

ತಲ್ಲೂರು ಗ್ರಾಮಕ್ಕೆ ಸಮೀಪದ ಇಂಚಲ ಗ್ರಾಮದ ಕಿರಾಣಿ ಅಂಗಡಿಯೊಂದರಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸಿದಾಗ ಆರೋಪಿಗಳನ್ನು ಬಂಧಿಸಲಾಯಿತು. ನೋಟುಗಳನ್ನು ಮುದ್ರಿಸುತ್ತಿದ್ದ ಕಲರ್‌ ಪ್ರಿಂಟರ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜಕೀಯ ಪಕ್ಷವೊಂದರ ನಂಟು?:

ಆರೋಪಿಯೊಬ್ಬನಿಗೆ ರಾಜಕೀಯ ಪಕ್ಷವೊಂದರ ನಂಟಿದೆ. ಇವರು ತಮ್ಮ ರಾಜಕೀಯ ಶಕ್ತಿಯನ್ನು ಬಳಸಿ, ಪ್ರಕರಣವನ್ನು ಮುಚ್ಚಿಹಾಕಲು ಹೊರಟಿದ್ದರು ಎಂದು ಹೇಳಲಾಗುತ್ತಿದೆ. ವಿಷಯ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀಂದ್ರಕುಮಾರ ರೆಡ್ಡಿ ಅವರು ಪ್ರಕರಣ ದಾಖಲು ಮಾಡುವಂತೆ ನೋಡಿಕೊಂಡರು. ಬಂಧಿತ ಆರೋಪಿಗಳಲ್ಲಿ ಒಬ್ಬರು ಗ್ರಾಮ ಲೆಕ್ಕಾಧಿಕಾರಿಯೂ ಇದ್ದಾರೆ ಎಂದು ಹೇಳಲಾಗುತ್ತಿದೆ. ಮುರಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.