ಗೋಕಾಕ: ‘ಉತ್ತರ ಕರ್ನಾಟಕದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಗಳು ಪ್ರಬಲಗೊಳ್ಳಬೇಕು’ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
‘ಉತ್ತರ ಕರ್ನಾಟಕದ ನಾಲ್ಕು ಒಕ್ಕೂಟಗಳು ಸೇರಿ ಒಟ್ಟು 14 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ದಕ್ಷಿಣ ಕರ್ನಾಟಕದಲ್ಲಿ ಹಾಲು ಒಕ್ಕೂಟಗಳು ಪ್ರಭಲವಾಗಿ ಬೆಳೆದಿವೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲೂ ಹಾಲಿನ ಒಕ್ಕೂಟಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ’ ಎಂದರು.
‘ಈ ಕಾರ್ಖಾನೆಯು ರೈತರ ಜೀವನಾಡಿಯಾಗಿದೆ. ನನಗೆ ರಾಜಕೀಯವಾಗಿ ಭದ್ರ ಬುನಾದಿ ಒದಗಿಸಿದ್ದೇ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ. ಹೀಗಾಗಿ ಈ ಋಣ ನನ್ನ ಮೇಲಿದೆ’ ಎಂದರು.
‘1992ರಲ್ಲಿ ಈ ಕಾರ್ಖಾನೆಯ ಅಧ್ಯಕ್ಷನಾಗುವ ಭಾಗ್ಯ ಮೊದಲ ಬಾರಿಗೆ ನನಗೆ ಒದಗಿ ಬಂದಿತು. 12 ವರ್ಷಗಳ ಕಾಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದೆ. 2004ರಲ್ಲಿ ಮೊದಲ ಬಾರಿಗೆ ಅರಭಾವಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದೆ’ ಎಂದು ನೆನಪಿಸಿಕೊಂಡರು.
‘ಆಗಸ್ಟ್ ತಿಂಗಳಲ್ಲಿ ಪ್ರವಾಹ ಹಾಗೂ ನಿರಂತರ ಮಳೆಯಿಂದ ನದಿ ತೀರದ ರೈತರ ಜಮೀನುಗಳಲ್ಲಿ ಕಬ್ಬು ಹಾನಿಯಾಗಿದೆ. ಅಂತಹ ಕಬ್ಬನ್ನು ತೆಗೆದುಕೊಳ್ಳುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಕಾರ್ಖಾನೆಯು ಅಂತಹ ಕಬ್ಬನ್ನು ಪಡೆದುಕೊಂಡು ದರವೊಂದನ್ನು ನಿಗದಿಪಡಿಸಬೇಕು’ ಎಂದು ಸಲಹೆ ನೀಡಿದರು.
ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ಪಾಟೀಲ, ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ನಿರ್ದೇಶಕರಾದ ಬಸಗೌಡ ಪಾಟೀಲ, ಕೃಷ್ಣಪ್ಪ ಬಂಡ್ರೊಳ್ಳಿ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗ ಪೂಜೇರಿ, ಕೆಂಚಗೌಡ ಪಾಟೀಲ, ಗಿರೀಶ ಹಳ್ಳೂರ, ಮಹಾದೇವಪ್ಪ ಭೋವಿ, ಭೂತಪ್ಪ ಗೊಡೇರ, ಮಾಳಪ್ಪ ಜಾಗನೂರ, ಮಲ್ಲಿಕಾರ್ಜುನ ಕಬ್ಬೂರ, ಶಿದ್ಲಿಂಗಪ್ಪ ಕಂಬಳಿ, ಯಲ್ಲವ್ವ ಸಾರಾಪೂರ, ಲಕ್ಕವ್ವ ಬೆಳಗಲಿ, ಪರಿಣಿತ ಸಮಿತಿ ಸದಸ್ಯರಾದ ವರ್ತಕ ವಿಕ್ರಮ ಅಂಗಡಿ, ಲೆಕ್ಕಪತ್ರಗಳ ಪರಿಶೋಧಕ ಸೈದಪ್ಪ ಗದಾಡಿ, ಗೋಕಾಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಮಂಟೂರ, ಸಿಡಿಒ ಜೆ.ಆರ್. ಬಬಲೇಶ್ವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.