ADVERTISEMENT

ದ್ರಾಕ್ಷಿ ಬೆಳೆಗಾರರ ನೆರವಿಗೆ ಬರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 11:15 IST
Last Updated 22 ಏಪ್ರಿಲ್ 2020, 11:15 IST
ಐಗಳಿಯಲ್ಲಿರುವ ಒಣದ್ರಾಕ್ಷಿ ಶೆಡ್‌
ಐಗಳಿಯಲ್ಲಿರುವ ಒಣದ್ರಾಕ್ಷಿ ಶೆಡ್‌   

ಐಗಳಿ: ‘ಸರ್ಕಾರವು ದ್ರಾಕ್ಷಿ ಬೆಳೆಗಾರರ ನೆರವಿಗೆ ಬರಬೇಕು’ ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಥಣಿ ತಾಲ್ಲೂಕು ಒಣದ್ರಾಕ್ಷಿ ಸಂಸ್ಕರಣಾ ಘಟಕದ ಅಧ್ಯಕ್ಷ ಶಹಜಹಾನ ಡೊಂಗರಗಾಂವ ಆಗ್ರಹಿಸಿದರು.

ಇಲ್ಲಿನ ಕಲ್ಯಾಣ ನಗರದಲ್ಲಿರುವ ಒಣದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಅಕಾಲಿಕ ಮಳೆಯಿಂದಾಗಿ ಆಗಿರುವ ಹಾನಿಯನ್ನು ವೀಕ್ಷಿಸಿ ಅವರು ಮಾತನಾಡಿದರು.

‘ಮೂರ್ನಾಲ್ಕು ದಿನಗಳಿಂದ ಆಗಾಗ ಬಂದ ಆಲಿಕಲ್ಲಿಸಹಿತ ಮಳೆ ಹಾಗೂ ಗಾಳಿಯಿಂದ ಒಣದ್ರಾಕ್ಷಿ ಶೆಡ್‌ಗಳ ಪತ್ರಾಸ್ ಹಾರಿ ಹೋಗಿ ಅಪಾರ ಹಾನಿಯಾಗಿದೆ. ಪರಿಣಾಮ ದ್ರಾಕ್ಷಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಒಣದ್ರಾಕ್ಷಿ ತಯಾರಿಸುವ ಸಮಯದಲ್ಲಿ ಮಳೆಯಾಗಿ ದ್ರಾಕ್ಷಿಯು ನೆನೆದು ಕಪ್ಪು ಬಣ್ಣಕ್ಕೆ ತಿರುಗಿದೆ. ಇದನ್ನು ಖರೀದಿಸಲು ವ್ಯಾಪಾರಿಗಳು ಮುಂದಾಗುವುದಿಲ್ಲ. ಹೀಗಾಗಿ, ಸರ್ಕಾರವು ಬೆಳೆಗಾರರಿಗೆ ಪರಿಹಾರ ನೀಡುವ ಮೂಲಕ ನೆರವಿಗೆ ಬರಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಹೋದ ವರ್ಷ ಮುಂಗಾರಿಯಲ್ಲಿ ಅತಿಯಾದ ಮಳೆಯಾಗಿ ಬೆಳೆಗಳು ನೀತಿನಲ್ಲಿ ನಿಂತು ಶಕ್ತಿ ಕಳೆದುಕೊಂಡಿದ್ದವು. ಇದರಿಂದ ಇಳುವರಿ ಕಡಿಮೆಯಾಗಿದೆ. ಈಗ ಮಳೆಯಿಂದಾಗಿ ಒಣದ್ರಾಕ್ಷಿ ತಯಾರಿಕೆಗೆ ತೊಡಕಾಗಿದೆ. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಒಳ್ಳೆಯ ಬೆಲೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರ ಕನಸು ನುಚ್ಚು ನೂರಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೋರಿದರು.

ಸ್ಥಳೀಯರಾದ ಕಾಶಿನಾಥ ಕುಂಬಾರಕರ, ನೂರಅಹ್ಮದ ಡೊಂಗರಗಾಂವ, ಸಿ.ಎಚ್. ಪಾಟೀಲ, ಈರಗೌಡ ಪಾಟೀಲ, ದಸ್ತಗೀರಸಾಬ ಕೋರಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.