ಬೆಳಗಾವಿ: ‘ಅಖಂಡ ಭಾರತದ ಕನಸು ನನಸಾಗಿಲ್ಲ’ ಎಂದು ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲರಾವ ಯಾಳಗಿ ವಿಷಾದ ವ್ಯಕ್ತಪಡಿಸಿದರು.
ಸಂಗೀತ ಕಲಾಮಂಚ ವತಿಯಿಂದ ಇಲ್ಲಿನ ಸರಸ್ವತಿ ವಾಚನಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಂ. ಕುಮಾರಗಂಧರ್ವ ಸ್ಮೃತಿ ಸಂಗೀತ ಸಮ್ಮೇಳನದಲ್ಲಿ ‘ಬೆಳಗಾವಿ ಭೂಷಣ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ನಮ್ಮಂತೆ ಲಕ್ಷಾಂತರ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ, ಅಖಂಡ ಭಾರತಕ್ಕೆ ಸ್ವಾತಂತ್ರ್ಯ ಸಿಗಲಿಲ್ಲವಲ್ಲ ಎಂಬ ನೋವಿದೆ’ ಎಂದು ಹೇಳಿದರು.
‘ಹದಿನಾರು ಮಂದಿ ಸ್ವಾತಂತ್ರ್ಯ ಯೋಧರು ಸೇರಿಕೊಂಡು ಟಿಳಕವಾಡಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದೆವು. ಆಗ ನಮ್ಮನ್ನು ಬಂಧಿಸಿದ ಪೊಲೀಸರು, ಕ್ಯಾಂಪ್ ಠಾಣೆಯ ಚಿಕ್ಕ ಕೋಣೆಯಲ್ಲಿ 15 ದಿನ ಕೂಡಿ ಹಾಕಿದ್ದರು. ಪ್ರಾತಃವಿಧಿಗಳನ್ನು ಅಲ್ಲಿಯೇ ಮಾಡಬೇಕಾಗುತ್ತಿತ್ತು. ಅಲ್ಲಿಯೇ ಊಟ. ಅದೊಂದು ನರಕದಂತಿತ್ತು. ನನ್ನ ಕಾಕಾ ಗೋವಿಂದರಾವ ಯಾಳಗಿ ಅವರು ಸ್ವಾತಂತ್ರ್ಯ ಯೋಧರು. ಅವರನ್ನು ಬಂಧಿಸಿ ₹10 ದಂಡ ಹಾಕಿದ್ದರು. ಲೋಕಮಾನ್ಯ ತಿಲಕರೇ ಆ ದಂಡವನ್ನು ತುಂಬಿ ಗೋವಿಂದರಾವ್ ಅವರನ್ನು ಬಿಡಿಸಿಕೊಂಡು ಬಂದಿದ್ದರು’ ಎಂದು ಅನುಭವ ಹಂಚಿಕೊಂಡರು.
ಗಾಯಕಿ ಸೇವಂತಿಲಾಲ ಶಹಾ ಮಾತನಾಡಿ, ‘ಸಂಗೀತ ಎನ್ನುವುದು ಮನುಷ್ಯ ಜೀವನದ ಅವಿಭಾಜ್ಯ ಅಂಗ. ಮನುಷ್ಯ ನೋವುಗಳನ್ನು ಮರೆಯಲು ದೇವರನ್ನು ಒಲಿಸಿಕೊಳ್ಳಲು ಸಂಗೀತಕ್ಕೆ ಮೊರೆ ಹೋಗುತ್ತಾನೆ’ ಎಂದರು.
ಸಂಘದ ಅಧ್ಯಕ್ಷೆ ಸ್ವರೂಪಾ ಇನಾಮದಾರ ಮಾತನಾಡಿದರು. ಕಾರ್ಯಾಧ್ಯಕ್ಷ ಸುಹಾಸ ಸಾಂಗಲಿಕರ, ವಕೀಲರಾದ ಅಜಯ ಸುನಾಳಕರ, ರಾಮ ಅಪ್ಟೆ, ಕಾರ್ಯದರ್ಶಿ ಆರ್.ಎಂ. ಕರಡಿಗುದ್ದಿ, ಕಾರ್ಯಾಧ್ಯಕ್ಷ ಸುಹಾಸ ಸಾಂಗಲಿಕರ, ಡಾ.ದತ್ತಪ್ರಸಾದ ಗಿಜರೆ, ಕುಬೇರ ಗಣೇಶವಾಡಿ, ಸದಾಶಿವ ಆರಬೊಳೆ, ವಿಜಯ ದೇಶಪಾಂಡೆ, ಆರ್.ಎಂ. ಕರಡಿಗುದ್ದಿ, ಜಿ.ಬಿ. ಇನಾಮದಾರ ಇದ್ದರು.
ಮುಂಬೈನ ಸ್ವಾನಂದಿ ನಿಸ್ಸೀಮ ಸಡೋಲಿಕರ ಹಾಡಿದರು. ಮಧ್ಯಪ್ರದೇಶದ ಜಬಲಪುರದ ದುರ್ಗಾ ಶರ್ಮಾ ವಯೋಲಿನ್ ವಾದನ ಪ್ರಸ್ತುತಪಡಿಸಿದರು. ಮುಂಬೈನ ಅದಿತಿ ಜೋಶಿ, ಬೆಳಗಾವಿಯ ರಾಜಪ್ರಭು ಧೋತ್ರೆ, ಪುಣೆಯ ಶಿಲ್ಪಾ ಅಠಲ್ಯೆ, ಮುಂಬೈನ ಪಂ.ಮಿಲಿಂದ್ ಚಿತ್ತಾಲ ಹಾಡಿದರು. ಗೋವಾದ ಉಸ್ತಾದ್ ಛೋಟೆ ರೆಹಮತ ಖಾನ್ ಸಿತಾರ ವಾದನ ಪ್ರಸ್ತುತಪಡಿಸಿದರು. ಡಾ.ಸುಧಾಂಶು ಕುಲಕರ್ಣಿ, ಸಾರಂಗ ಕುಲಕರ್ಣು, ವಿನಾಯಕ ನಾಯಿಕ, ಅನಂತ ಹೆಗಡೆ ಸಾಥ್ ನೀಡಿದರು.
ವಿಜಯ ಬಾಂದಿವಡೆಕರ, ಮೀರಾ ಅಜಗಾಂವಕರ ಹಾಗೂ ಪ್ರಿಯಾ ಕವಠೆಕರ ನಿರೂಪಿಸಿದರು. ಅನಂತ ಕುಲಕರ್ಣಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.