ಗೋಕಾಕ: ‘ಶಿಕ್ಷಣ ಮಗುವಿನ ಅವಿಭಾಜ್ಯ ಅಂಗ, ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಹಾಕುತ್ತಿದ್ದಾರೆ. ಶಿಕ್ಷಣ ಇಲಾಖೆಗೆ ಶಕ್ತಿಯಾಗಿ ಅಡುಗೆ ಸಿಬ್ಬಂದಿ ಇದ್ದಾರೆ’ ಎಂದು ಬಿಇಒ ಜಿ.ಬಿ. ಬಳಗಾರ ಹೇಳಿದರು.
ಶನಿವಾರ ನಗರದಲ್ಲಿ ಮಹಾಲಕ್ಷ್ಮಿ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಗಳು, ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ (ಎಂ.ಡಿ.ಎಂ.) ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಗೋಕಾಕ ವಲಯದ ಅಡುಗೆ ಸಿಬ್ಬಂದಿಗಾಗಿ ಆಯೋಜಿಸಿದ್ದ ‘ತರಬೇತಿ ಕಾರ್ಯಾಗಾರ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಗೋಕಾಕ ವಲಯದಲ್ಲಿ ಬಗೆಬಗೆಯ ಅಡುಗೆ ಮಾಡಿ ಮಕ್ಕಳಿಗೆ ನೀಡುತ್ತಿರುವುದು ಇಡೀ ಜಿಲ್ಲೆಗೆ ಮಾದರಿಯಾಗಿದೆ. ಇದು ಸಾಕಾರಗೊಳ್ಳಲು ಶಾಲೆಯ ಮುಖ್ಯಾಧ್ಯಾಪಕರು ತನು, ಮನ, ಧನದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಯೋಜನೆ ಅನುಷ್ಠಾನಗೊಳಿಸಲು ಅಡುಗೆ ಸಿಬ್ಬಂದಿ ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಇಲಾಖೆ ಅವರಿಗೆ ತರಬೇತಿ ನೀಡಲು ಮುಂದಾಗಿದ್ದು ತರಬೇತಿಯ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತುಕಾರಾಮ ಕಾಗಲ್ ಉದ್ಘಾಟಿಸಿದರು. ಸಿಲಿಂಡರ್ಗೆ ಬೆಂಕಿ ತಗುಲಿದರೆ ನಂದಿಸುವ ಪ್ರಾತ್ಯಕ್ಷಿಕೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಪ್ರದರ್ಶಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಡ್ಡೆಪ್ಪ ತೋಳಿನವರ, ನಗರಸಭೆ ಮಾಜಿ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಸಿಯೂಟ ಅಧಿಕಾರಿ ಎ.ಬಿ.ಮಲ್ಲಬನ್ನವರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಮುರಗೋಡ, ಎಚ್.ಪಿ. ಗ್ಯಾಸ್ ವಿತರಕ ಸಂಸ್ಥೆಯ ಮಲ್ಲಿಕಾರ್ಜುನ ಚುನಮರಿ, ಎಂ.ವಿ. ಬಾಗೆನ್ನವರ, ಜಿ.ಆರ್. ಸನದಿ, ಅಗ್ನಿಶಾಮಕ ದಳದ ಠಾಣಾಧಿಕಾರಿ ಎಸ್.ಎನ್. ಮೆಳವಂಕಿ, ಎಸ್.ಎಂ. ಲೋಕನ್ನವರ, ಮಂಜುನಾಥ್ ಕಡೋಲಿ, ಸಂಜು ನಾಯಕ, ಎಂ.ಎಲ್. ಹಸರಂಗಿ, ಎಸ್.ಎಸ್. ಮಾಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.