ಅಥಣಿ (ಬೆಳಗಾವಿ ಜಿಲ್ಲೆ): ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ ಆಗುತ್ತಿದ್ದು, ತಾಲ್ಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. 2019ರಲ್ಲಿ ಉಂಟಾಗಿದ್ದ ನೆರೆಯ ನೋವನ್ನು ಮರೆಯುವ ಮುನ್ನವೇ ಮತ್ತೊಮ್ಮೆ ಸಂಕಷ್ಟದ ಪರಿಸ್ಥಿತಿ ಬಂದೊದಗುವ ಆತಂಕ ಇಲ್ಲಿನ ಜನರಲ್ಲಿ ಮನೆ ಮಾಡಿದೆ.
ತಾಲ್ಲೂಕಿನ ದರೂರ ಬಳಿಯ ಮುಖ್ಯ ಸೇತುವೆ ಮುಳುಗುವ ಹಂತದಲ್ಲಿದೆ. ನೂರಾರು ಎಕರೆ ಜಮೀನುಗಳಿಗೆ ನೀರು ನುಗಿದ್ದು, ಬೆಳೆ ಕಳೆದುಕೊಳ್ಳುವ ಭೀತಿ ರೈತರದಾಗಿದೆ. ತೀರ್ಥ, ನದಿಇಂಗಳಗಾವ, ಸಪ್ತಸಾಗರ, ದರೂರ, ಹುಲಗಬಾಳಿ, ಅವರಖೋಡ, ಹಲ್ಯಾಳ ತೋಟದ ವಸತಿಗಳಲ್ಲಿರುವ ಜನರು ಮನೆಗಳನ್ನು ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.
‘ಈ ಬಾರಿಯೂ ನೆರೆ ಬಂದರೆ ನಾವೆಲ್ಲಿಗೆ ಹೋಗಬೇಕು. ಈವರೆಗೂ ನಮಗೆ ಶಾಶ್ವತ ಪರಿಹಾರ ನೀಡಿಲ್ಲ. ಮತ್ತು ಮುಳುಗಡೆ ಹಂತಕ್ಕೆ ಬಂದಾಗ ಮಾತ್ರ ರಾಜಕಾರಣಿಗಳು ಹಾಗೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಾರೆ. 2019ರಲ್ಲಿ ಪ್ರವಾಹ ಬಂದಾಗ ಹಲವು ಕುಟುಂಬಗಳು ಬೀದಿಪಾಲಾಗಿವೆ. ಈವರೆಗೂ ಅವರಿಗೆ ಮನೆ ಕಟ್ಟಿಕೊಟ್ಟಿಲ್ಲ’ ಎಂದು ಮುಖಂಡ ರಮೇಶಗೌಡ ಪಾಟೀಲ ದೂರಿದರು. ‘ಕೃಷ್ಣಾ ನದಿಯಲ್ಲಿ ನೀರು ಹೆಚ್ಚಾದರೆ ನೂರಾರು ಕುಟುಂಬಗಳು ಬೀದಿಗೆ ಬರುವುದರಲ್ಲಿ ಸಂಶಯವಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
‘ಮುನ್ನೆಚ್ಚರಿಕೆ ನೀಡುವ ಕೆಲಸವನ್ನು ತಾಲ್ಲೂಕು ಆಡಳಿತ ಮಾಡಿಲ್ಲ. ಇದರಿಂದ ನೂರಾರು ಪಂಪ್ಸೆಟ್ಗಳು ನೀರಲ್ಲಿ ಮುಳುಗಿವೆ. ಇದರಿಂದ ರೈತರು ನಷ್ಟ ಅನುಭವಿಸಿದ್ದಾರೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ದರೂರ ಸೇತುವೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.