ರಾಯಬಾಗ: ನೆರೆಯ ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ತಾಲ್ಲೂಕಿನ ನದಿ ಪಾತ್ರದಲ್ಲಿನ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ರೈತರು ನದಿಯೊಳಗೆ ಹಾಗೂ ದಂಡೆಯಲ್ಲಿ ಅಳವಡಿಸಿದ್ದ 400ರಿಂದ 500 ಪಂಪ್ಸೆಟ್ಗಳು ಗುರುವಾರ ರಾತ್ರಿ ಏಕಾಏಕಿ ನೀರು ಏರಿಕೆಯಾದ ಪರಿಣಾಮ ಮುಳುಗಿದ್ದವು. ರೈತರು ಜೀವದ ಹಂಗನ್ನೂ ತೊರೆದು ಬೆಳಿಗ್ಗೆಯಿಂದಲೇ ಅವುಗಳನ್ನು ಹೊರಗೆ ತೆಗೆಯುತ್ತಿದ್ದ ದೃಶ್ಯಗಳು ಕಂಡುಬಂದವು.
ಅಲ್ಲಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ. ಜಲಾವೃತವಾಗಿದ್ದರೂ ರೈತರು ದನ ಕರುಗಳಿಗೆ ಮೇವು ತರಲು ಕಟಾವು ಮಾಡುತ್ತಿದ್ದ ದೃಶ್ಯ ಕಂಡುಬಂತು.
‘ನದಿ ಪಾತ್ರದ ಗ್ರಾಮಗಳಾದ ಬಾವನ ಸವದತ್ತಿ, ದಿಗ್ಗೆವಾಡಿ, ಜಲಾಲಪುರ, ಬಿರಡಿ, ಕುಡಚಿ, ಖೇಮಲಾಪುರ, ಸಿದ್ದಾಪುರ, ಶಿರಗೂರ ಮೊದಲಾದ ಗ್ರಾಮಗಳಲ್ಲಿ ತಾಲ್ಲೂಕು ಆಡಳಿತ ರೆಡ್ಅಲರ್ಟ್ ಘೋಷಣೆ ಮಾಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಿಗಾಗಿ 40 ಕಾಳಜಿ ಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಡಾ.ಮೋಹನ ಬಸ್ಮೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.